ಗೋಹತ್ಯೆ ನಿಷೇಧ ಕಾಯ್ದೆಗೆ ಅಂಕಿತ ಬೇಡ : ದೇವೇಗೌಡ
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನೇತೃತ್ವದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಮನವಿ ಅರ್ಪಿಸಿದ ಪಕ್ಷ ಶಾಸಕ ಮತ್ತು ಸಂಸದರನ್ನೊಳಗೊಂಡ ನಿಯೋಗ, ಈ ವಿಧೇಯಕ ಜಾರಿಗೆ ಬಂದರೆ ರಾಜ್ಯದಲ್ಲಿ ಅಶಾಂತಿ ತಲೆದೋರಲಿದೆ ಎಂದು ವಿವರಿಸಿತು. ರಾಜ್ಯದಲ್ಲಿ 1964ರಲ್ಲಿ ಜಾರಿಗೆ ಬಂದಿರುವ ಗೋಹತ್ಯೆ ನಿಷೇದ ಕಾಯ್ದೆ ಯಾವುದೇ ಅಡ್ಡಿ ಇಲ್ಲದೇ ಅನುಷ್ಠಾನವಾಗುತ್ತಿದೆ. 56 ವರ್ಷಗಳಿಂದ ಯಾವುದೇ ಸಮಸ್ಯೆ ತಲೆದೋರಿಲ್ಲ. ಆದರೂ ಸರಕಾರ ಯಾವುದೇ ಸಂಘ-ಸಂಸ್ಥೆಗಳ ಒತ್ತಡವೂ ಇಲ್ಲದೇ ಈ ವಿವಾದಾತ್ಮಕ ವಿಧೇಯಕ ಜಾರಿಗೆ ತಂದಿದೆ ಎಂದು ನಿಯೋಗ ಮನವರಿಕೆ ಮಾಡಿಕೊಟ್ಟಿತು.
ಈ ಕಾಯ್ದೆ ಜಾರಿಗೆ ಬಂದರೆ ಸಮಾಜದಲ್ಲಿ ಕೋಮುಸಾಮರಸ್ಯ ಹಾಳಾಗುತ್ತದೆ. ರೈತರ ಆರ್ಥಿಕ ಪರಿಸ್ಥಿತಿ ಮೇಲೂ ಪರಿಣಾಮ ಬೀರುತ್ತದೆ. ಈ ಹಿಂದಿನ ಕಾಯ್ದೆಯನ್ನು ಸುಪ್ರಿಂಕೋರ್ಟ್ ಅನೇಕ ಸಂದರ್ಭಗಳಲ್ಲಿ ಎತ್ತಿಹಿಡಿದಿದೆ. ಹೊಸ ವಿಧೇಯಕ ಜಾರಿಗೆ ಮುನ್ನವೇ ಸಮಾಜದಲ್ಲಿ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ, ದಾಳಿ ನಡೆಯುತ್ತಿದೆ. ಕಾಯ್ದೆ ಜಾರಿಗೆ ಬಂದು ಬಿಟ್ಟರೆ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತದೆ. ಹೀಗಾಗಿ ವಿಧೇಯಕ ಜಾರಿಗೆ ಅವಕಾಶ ಕೊಡಬಾರದು ಎಂದು ನಿಯೋಗ ರಾಷ್ಟ್ರಪತಿ ಅವರಿಗೆ ಸಲ್ಲಿಸಿತು.
ಗ್ಯಾಲರಿ : ಜೆಡಿಎಸ್ ಬಳಗ ರಾಷ್ಟ್ರಪತಿಯವರನ್ನು ಭೇಟಿ ಮಾಡಿದ ಸಂದರ್ಭ