ಪ್ರೀತಿ ಪ್ರೇಮ ಕಾಮ ಮತ್ತು ಕಗ್ಗೊಲೆ
ಅಪಾರ್ಟ್ ಮೆಂಟಿನಲ್ಲಿ ಮನೆಗೆಲಸ ಮಾಡುತ್ತಿದ್ದ ಆಕೆಯ ಹೆಸರು ಲಕ್ಷ್ಮಮ್ಮ. ಅಲ್ಲೇ ಗೆಸ್ಟ್ ಹೌಸಿನಲ್ಲಿ ಕೆಲಸಮಾಡಿಕೊಂಡಿದ್ದ ಹುಡುಗನ ಹೆಸರು ಕೆ.ನಾರಾಯಣ ರೆಡ್ಡಿ. ಇಬ್ಬರಿಗೂ ವಯನಾದ ಸಂಬಂಧ! ವಯಸ್ಸಿನಲ್ಲಿ ತುಂಬಾ ಅಂತರ ಇದ್ದುದರಿಂದ ಯಾರಿಗೂ ಏನೂ ಅನುಮಾನ ಬಂದಿಲ್ಲ.
ಏನಾದರೂ ಮಾಡಿ ತಾನು ಕೆಲಸ ಮಾಡುತ್ತಿದ್ದ ಮನೆ ಯಜಮಾನರ ಮಗಳು ಮಲ್ಲಿಕಾಳನ್ನು ನಾರಾಯಣ ರೆಡ್ಡಿಗೆ ಕಟ್ಟಬೇಕೆಂಬ ಹುನ್ನಾರ ಲಕ್ಷಮ್ಮನಿಗೆ ಬರುತ್ತದೆ. ಏಕೆಂದರೆ, ಅವರಿಬ್ಬರಿಗೂ ಗಂಟುಹಾಕಿದರೆ ತನ್ನ ಮತ್ತು ರೆಡ್ಡಿಯ ನಂಟು ಹಾಗೇ ಇರುತ್ತದೆಂಬ ಕನಸು ಆಕೆಗೆ. ಹಾಗಾಗಿ, ತಾನು ಕೆಲಸ ಮಾಡುವ ಮನೆ ಯಜಮಾನರ ಮಗಳು ಮಲ್ಲಿಕಾಳನ್ನು ರೆಡ್ಡಿಗೆ ಜೋಡಿಸುವ ಸ್ಕೆಚ್ ಹಾಕುತ್ತಾಳೆ.
ಆದರೆ, ಮಲ್ಲಿಕಾಗೆ ನಾರಾಯಣ ರೆಡ್ಡಿಯನ್ನು ಮದುವೆ ಆಗುವ ಇಷ್ಟ ಇಲ್ಲ. ಅವರ ತಂದೆ ತಾಯಿಗಳು ಯಲಹಂಕದ ಕೃಷ್ಣ ಕುಮಾರ್ ಎಂಬ ಗುತ್ತಿಗೆದಾರನೊಂದಿಗೆ ಮದುವೆ ಮಾಡಿಕೊಡಲು ಇಷ್ಟಪಡುತ್ತಾರೆ. ಅದರಂತೆ ನಿಶ್ಚಿತಾರ್ಥವೂ ಆಗಿಹೋಗುತ್ತದೆ.
ಇದನ್ನು ಕಣ್ಣಾರೆ ಕಂಡ ಲಕ್ಷ್ಮಮ್ಮ ಮತ್ತು ರೆಡ್ಡಿಗೆ ಹೊಟ್ಟೆ ಉರಿ. ಏನಾದರೂ ಮಾಡಿ ಈ ಕೃಷ್ಣ ಕುಮಾರನನ್ನೇ ಮುಗಿಸಿದರೆ ಕೊನೆಗೆ ಮಲ್ಲಿಕಾ ರೆಡ್ಡಿಯನ್ನೇ ಮದುವೆ ಆಗಬೇಕಾಗುತ್ತದೆ, ಆಗ ಅವರ ಮನೆಯಲ್ಲಿ ನಾನೇ ಕೆಲಸ ಮಾಡುತ್ತಿರುತ್ತೇನೆ, ನನ್ನ ಮತ್ತು ರೆಡ್ಡಿಯ ಸಂಬಂಧ ಹಾಗೇ, ಅಬಾಧಿತವಾಗಿ ಮುಂದುವರೆಯುತ್ತಿರುತ್ತದೆ ಎಂಬ ದೂರಾಲೋಚನೆ ಲಕ್ಷ್ಮಮ್ಮನಿಗೆ ಬರುತ್ತದೆ.
ಜಮೀನೊಂದನ್ನು ತೋರಿಸುವ ನೆಪಹಾಕಿಕೊಂಡು ಲಕ್ಷ್ಣಮ್ಮ ಮತ್ತು ರೆಡ್ಡಿ ತಮ್ಮ ಜತೆಗೆ ಕೃಷ್ಣ ಕುಮಾರನನ್ನು ಚಿತ್ತೂರಿನ ಅಲ್ಲೆಪಲ್ಲಿ ಕಾಡಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಅವನ ಕತ್ತು ಕುಯ್ದು ಸಾಯಿಸಿ ಬಿಡುತ್ತಾರೆ. ಕೆಲಸವಾದ ನಂತರ ಏನೂ ಗೊತ್ತಿಲ್ಲದವರಂತೆ ಮತ್ತೆ ಅಪಾರ್ಟ್ ಮೆಂಟಿಗೆ ಬಂದು ತಮ್ಮ ಪಾಡಿಗೆ ತಾವು ನಿತ್ಯ ಕೆಲಸಗಳನ್ನು ಮುಂದುವರೆಸುತ್ತಾರೆ.
ಕಾಣೆಯಾದ ಮಗನನ್ನು ಹುಡುಕುವ ಕೃಷ್ಣಕುಮಾರನ ತಂದೆಯ ಹುಡುಕಾಟ ಒಂದು ದಿನ ಕೊನೆಗೊಳ್ಳುತ್ತದೆ. ಯಲಹಂಕದ ಪೊಲೀಸ್ ಅಧಿಕಾರಿ ಇ ಕೆಂಚೇಗೌಡ ಅವರು ಸೆಲ್ ಫೋನು ಮಾತುಕತೆಗಳ ಸುಳಿವು ಇಟ್ಟುಕೊಂಡು ಕಾಣೆಯಾದ ಹುಡುಗನ ಪತ್ತೆಗೆ ಹೊರಡುತ್ತಾರೆ. ಕಾಡಿನಲ್ಲಿ ಕೊಲೆ ಆದುದು ಪತ್ತೆ ಆಗುತ್ತದೆ. ಅಂತಿಮವಾಗಿ ನಿರಪರಾಧಿ ಕೃಷ್ಣ ಕುಮಾರ್ ಜೀವ ಕಳೆದುಕೊಂಡರೆ ಪ್ರೀತಿ ಪ್ರೇಮ ಕಾಮದ ಸೆಳೆತಕ್ಕೆ ಸಿಲುಕಿ ಕೊಲೆ ಮಾಡಲೂ ಹೇಸದ ಜೋಡಿ ಹಕ್ಕಿಗಳು ಜೈಲುವಾಸಿಗಳಾಗುತ್ತಾರೆ.