ಬಿಹಾರದಲ್ಲಿ ಹಾಡುಹಗಲೇ ರೈಲು ಲೂಟಿ
ಘಟನೆಯಲ್ಲಿ ಗುಂಡೇಟು ತಿಂದಿರುವ ಪೊಲೀಸ್ ಪೇದೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ. ಸುಮಾರು 21 ಪ್ರಯಾಣಿಕರು ಗಾಯಗೊಂಡಿದ್ದಾರೆ. ಜಮಾಯಿ ರೈಲ್ವೆ ನಿಲ್ದಾಣದಿಂದ ಶಸ್ತ್ರಸಜ್ಜಿತ 35 ಜನರನ್ನು ಹೊಂದಿದ ಡಕಾಯಿತರ ತಂಡವೊಂದು ದಿಲ್ಲಿ-ಶಿಲ್ಡಾ ಎಕ್ಸ್ ಪ್ರೆಸ್ ರೈಲನ್ನೇರಿದೆ. ಎಸಿ ಮತ್ತು ಸ್ಲಿಪರ್ ಕೋಚ್ ಗೆ ತೆರಳಿದ ಡಕಾಯಿತರ ತಂಡ ಗುಂಡು ಹಾರಿಸಿ ಜನರಲ್ಲಿ ಭೀತಿ ಹುಟ್ಟಿಸಿದೆ.
ನಂತರ ಹಣ ಮತ್ತು ಚಿನ್ನಾಭರಣಗಳನ್ನು ಕೊಡಿ ಇಲ್ಲದಿದ್ದರೆ ನಿಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದೆ. ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಪೊಲೀಸ್ ಪೇದೆಯೊಬ್ಬ ಮಧ್ಯೆ ಪ್ರವೇಶಿಸಿದ್ದರಿಂದ ಆತನ ಮೇಲೆ ಡಕಾಯಿತರು ಗುಂಡಿನ ದಾಳಿ ನಡೆಸಿದ್ದಾರೆ. ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣಗಳನ್ನು ದೋಚಿಕೊಂಡು ಡಕಾಯಿತರು ಪರಾರಿಯಾಗಿದ್ದಾರೆ.
ಡಕಾಯಿತರ ದಾಳಿಗೆ ಗುರಿಯಾದ ಪ್ರಯಾಣಿಕರು ಖೀಲಾ ನಿಲ್ದಾಣದ ಸ್ಟೇಷನ್ ಮಾಸ್ಟರ್ ಕಚೇರಿಗೆ ದಾಳಿ ನಡೆಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರು ಮಂದಿ ಪ್ರಯಾಣಿಕರು ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ರೈಲ್ವೆ ಇಲಾಖೆ ಪೊಲೀಸ್ ಆಯುಕ್ತ ಆರ್ ಕೆ ಶರ್ಮಾ ತಿಳಿಸಿದ್ದಾರೆ.