ರೆಡ್ಡಿಗಳ ಸವಾಲಿಗೆ ಸಿದ್ದ : ಸಿದ್ದರಾಮಯ್ಯ
ಯುವಕರ, ಹಿರಿಯರ ದಂಡು ಕಟ್ಟಿಕೊಂಡು ಅಕ್ರಮ ಗಣಿಗಾರಿಕೆಯ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ಹೊರಟಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಳ್ಳಾರಿಯಲ್ಲಿ ಚುನಾವಣೆ ಎದುರಿಸಲು ತಾವು ಸಿದ್ಧರಿರುವುದಾಗಿ ಹೇಳಿ ಸವಾಲನ್ನು ಸ್ವೀಕರಿಸಿದ್ದಾರೆ.
ಬಿಜೆಪಿಯಲ್ಲಿ ಒಡಕು ಮೂಡಿರುವುದು ಈಗ ಸಾಬೀತಾಗಿದೆ. ಸರಕಾರ ಬಿದ್ದುಹೋಗುವುದೆಂಬ ಹೆದರಿಕೆ ಅವರಲ್ಲಿ ಶುರುವಾಗಿದೆ. ಒಬ್ಬರಲ್ಲ ಇಂಥ ನೂರು ರೆಡ್ಡಿಗಳು ಬಂದರೂ ಅವರ ವಿರುದ್ಧ ಚುನಾವಣೆ ಎದುರಿಸಲು ಸಿದ್ಧ. ರೆಡ್ಡಿ ಸಹೋದರರು ತಲೆ ಬೋಳಿಸಿಕೊಂಡು ಬಳ್ಳಾರಿಯಲ್ಲಿ ಓಡಾಡಲಿ ಎಂದು ಪ್ರತಿ ವಾಗ್ದಾಳಿ ನಡೆಸಿದ್ದಾರೆ. ಎಂಟನೇ ದಿನಕ್ಕೆ ಕಾಲಿಟ್ಟಿರುವ ಕಾಂಗ್ರೆಸ್ ನಾಯಕರ ಪಾದಯಾತ್ರೆ ಚಿತ್ರದುರ್ಗದ ಜವಗೊಂಡನಹಳ್ಳಿಯಿಂದ ಮುಂದುವರಿಯಲಿದೆ.
ಮೈತ್ರಿ ಕೇವಲ ಊಹಾಪೋಹ : ಈ ನಡುವೆ, ಕಾಂಗ್ರೆಸ್ ವಿರುದ್ಧ ಹಳೆ ಜೋಡಿಗಳಾದ ಬಿಜೆಪಿ ಮತ್ತು ಜೆಡಿಎಸ್ ಕೈಜೋಡಿಸಲಿವೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಈ ಸ್ನೇಹದ ವದಂತಿಯನ್ನು ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಸ್ನೇಹಿತರ ದಿನಾಚರಣೆಯಂದೇ ಅಲ್ಲಗಳೆದಿವೆ. ಜೆಡಿಎಸ್ ಜೊತೆಗಿನ ಮೈತ್ರಿ ಕೇವಲ ಊಹಾಪೋಹ ಎಂದು ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ಹೇಳಿದ್ದಾರೆ.
ಮೈತ್ರಿಯ ವದಂತಿಯನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೂಡ ತಳ್ಳಿಹಾಕಿದ್ದಾರೆ. ನಮ್ಮ ಹೋರಾಟವೇನಿದ್ದರೂ ಅಕ್ರಮ ಗಣಿಗಾರಿಕೆಯ ವಿರುದ್ಧವೇ ಹೊರತು, ಇದಕ್ಕಾಗಿ ಯಾವ ಪಕ್ಷದ ಜೊತೆಯೂ ಕೈಜೋಡಿಸುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಅಕ್ರಮ ಗಣಿಗಾರಿಕೆಯ ವಿರುದ್ಧ ಆರ್ಎಸ್ಎಸ್ ಕೂಡ ಹೋರಾಟ ನಡೆಸಿದರೆ ಜೆಡಿಎಸ್ ಬೆಂಬಲಿಸುತ್ತದೆ ಎಂದು ಕುಮಾರಸ್ವಾಮಿ ನುಡಿದಿದ್ದಾರೆ.