ರೆಡ್ಡಿಗಳ ರಾಜೀನಾಮೆ ? ಸಿಎಂಗೆ ಅಡ್ವಾಣಿ ಸಲಹೆ
ದೆಹಲಿ ಪ್ರವಾಸದಲ್ಲಿರುವ ಯಡಿಯೂರಪ್ಪ, ಇಂದು ಬೆಳಗ್ಗೆ ಅದ್ಯಕ್ಷ ನಿತಿನ್ ಗಡ್ಕರಿ ಅವರ ನಿವಾಸಕ್ಕೆ ತೆರಳಿ 30 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಹಮ್ಮಿಕೊಂಡಿರುವ ಪಾದಯಾತ್ರೆ, ರೆಡ್ಡಿ ಸಹೋದರರಿಂದ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಗಡ್ಕರಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಇಬ್ಬರ ಮಾತುಕತೆಗಳ ಲಭ್ಯವಾಗಿಲ್ಲವಾದರೂ ಮುಖ್ಯವಾಗಿ ರೆಡ್ಡಿ ಸಹೋದರರ ವಿಷಯಗಳೇ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಗೆ ಪರ್ಯಾಯವಾಗಿ ರಾಜ್ಯದ ನಾಲ್ಕು ಕಡೆಗಳಲ್ಲಿ ನಡೆಸಲು ಉದ್ದೇಶಿಸಲಾಗಿರುವ ಸಮಾವೇಶ, ಬಳಿಕ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಸೇರಿದಂತೆ ಪ್ರಮುಖ ವಿಷಯಗಳ ಚರ್ಚೆಯಾಗಿವೆ. ಆನಂತರ ಎಲ್ ಕೆ ಅಡ್ವಾಣಿ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ, ಗಣಿಗಾರಿಕೆಯಿಂದ ಪಕ್ಷದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು, ರೆಡ್ಡಿ ಸಹೋದರರ ಅಟಾಟೋಪ, ಇವರಿಗೆ ಭವಿಷ್ಯದಲ್ಲಿ ಕಡಿವಾಣ ಹಾಕುವ ಬಗ್ಗೆಯೂ ಅಡ್ವಾಣಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಇದೇ ವೇಳೆ ಮುಂದಿನ ತಿಂಗಳು 20ರ ನಂತರ ಸಂಪುಟ ವಿಸ್ತರಣೆ ಮಾಡುವುದು. ಯಾವ ಯಾವ ಸಚಿವರನ್ನು ಕೈಬಿಡುವುದು. ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬ ಕುರಿತು ಅಡ್ವಾಣಿ ಅವರಿಂದ ಯಡಿಯೂರಪ್ಪ ಸಲಹೆಯನ್ನು ಪಡೆದುಕೊಂಡಿದ್ದಾರೆ.