ಭಾವಿಪತಿ ಕೊಂದ ಶುಭಾ ಮೇಲ್ಮನವಿ ತಿರಸ್ಕೃತ
17ನೇ ತ್ವರಿತ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ವಕೀಲೆ ಶುಭಾ ಪರವಾಗಿ ವಕೀಲ ಸಿವಿ ನಾಗೇಶ್ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ಇಂದು(ಜು.23) ವಜಾಗೊಳಿಸಿದೆ
ಟೆಕ್ಕಿ ಗಿರೀಶ್ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ , ಶುಭಾ ಅವರನ್ನು ಶಿಕ್ಷೆಯಿಂದ ಅಮಾನತುಗೊಳಿಸಲು ನಿರಾಕರಿಸಿತು. ಹಾಗೂ ವಿಚಾರಣೆಯನ್ನು ಆಗಸ್ಟ್ 4ಕ್ಕೆ ಮುಂದೂಡಿದೆ.
2003ರ ಡಿಸೆಂಬರ್ 3ರಂದು ವಿವೇಕನಗರ ಠಾಣಾ ವ್ಯಾಪ್ತಿಯ ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ ನಡೆದಿದ್ದ ಬಿ.ವಿ ಗಿರೀಶ್ (27)ಕೊಲೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ, ಪ್ರಮುಖ ಆರೋಪಿ ಶುಭಾ ಹಾಗೂ ಮೂವರಿಗೆ ಭಾರತೀಯ ದಂಡ ಸಂಹಿತೆ 302,120 ಹಾಗೂ 201 ರ ಅನ್ವಯ ಜೀವಾವಧಿ ಶಿಕ್ಷೆ ಯನ್ನು ವಿಧಿಸಿ 17 ನೇ ತ್ವರಿತ ನ್ಯಾಯಾಲಯ ಜು.14ರಂದು ಆದೇಶ ಹೊರಡಿಸಿತ್ತು.
ಶುಭಾ ಖಂಡಿತಾ ನ್ಯಾಯ ಸಿಗುತ್ತದೆ: ಶುಭಾ ಪರ ವಕೀಲ ಸೋಲರಿಯದ ಸರದಾರ ಎಂದೇ ಖ್ಯಾತರಾದ(ಸೋತಿರುವುದು ಬೆರೆಳೆಣಿಕೆ ಕೇಸ್ ಗಳು ಮಾತ್ರ) ಕ್ರಿಮಿನಲ್ ಲಾಯರ್ ಸಿವಿ ನಾಗೇಶ್ ಅವರು, ಶುಭಾಗೆ ಖಂಡಿತಾ ನ್ಯಾಯ ಸಿಗುತ್ತದೆ. ಮುಂದಿನ ವಿಚಾರಣೆಯಲ್ಲಿ ಏನು ತೀರ್ಮಾನವಾಗದಿದ್ದರೆ ಸುಪ್ರೀಂಕೋರ್ಟಿಗೂ ಹೋಗುತ್ತೇವೆ ಎಂದಿದ್ದಾರೆ.
ಕೇವಲ ಸಾಂದರ್ಭಿಕವಾಗಿ ಕಂಡ ಸಾಕ್ಷಿಗಳು, ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಇಟ್ಟುಕೊಂಡು ಗಿರೀಶ್ ಪರ ವಕೀಲರು ಮಂಡಿಸಿದ ವಾದದ ಆಧಾರದ ಮೇಲೆ ಶುಭಾ ಶಿಕ್ಷೆ ಸಿಗುವಂತಾಗಿರುವುದು ದುರದೃಷ್ಟಕರ. ಮಾಧ್ಯಮಗಳು ಆಕೆಯನ್ನು ರಕ್ತಪಿಪಾಸು, ರಾಕ್ಷಸಿ ಎಂದೆಲ್ಲಾ ರೋಚಕವಾಗಿ ಬಿಂಬಿಸುವುದನ್ನು ಕೈಬಿಡಬೇಕು ಎಂದು ನಾಗೇಶ್ ಹೇಳಿದ್ದಾರೆ.