ರೆಡ್ಡಿ ಬಣಕ್ಕೆ ಗುಡ್ ಬೈ : ಯಡ್ಡಿ ಬಣಕ್ಕೆ ಜೈಜೈ
ಹಿಂದೆ ಮಾಡಿದ ತಪ್ಪನ್ನು ಇನ್ನೆಂದೂ ಮಾಡುವುದಿಲ್ಲ. ಬಳ್ಳಾರಿ ಸಚಿವತ್ರಯರು ನಡೆಸುತ್ತಿರುವ ಬಳ್ಳಾರಿಯಿಂದ ಮೈಸೂರುವರೆಗಿನ ಪಾದಯಾತ್ರೆಯನ್ನು ಬೆಂಬಲಿಸುವುದಿಲ್ಲ ಎಂದು ಸಚಿವ ರೇಣುಕಾಚಾರ್ಯ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ರಾಜು ಕಾಗೆ, ಬಿಪಿ ಹರೀಶ್ ಮತ್ತು ಕಿರಣ್ ಕುಮಾರ ಮಾಧ್ಯಮಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಚಿವರಾದ ಶ್ರೀರಾಮುಲು ಮತ್ತು ಜನಾರ್ದನರೆಡ್ಡಿ ಪಾದಯಾತ್ರೆಯನ್ನು ಘೋಷಿಸುವ ಮೊದಲು ಯಾರೊಂದಿಗೂ ಚರ್ಚಿಸಿಲ್ಲ. ಅದು ಪಕ್ಷಕ್ಕೆ ಸಂಬಂಧಿಸಿದ ವಿಷಯವಲ್ಲ. ಹೀಗಾಗಿ ನಮ್ಮ ಬೆಂಬಲವಿಲ್ಲ. ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ. ಒಂದು ವೇಳೆ ಅವರೇನಾದರೂ ಪಾದಯಾತ್ರೆ ಮಾಡೋಣ ಎಂದರೆ ಬೆಂಬಲಿಸುತ್ತೇವೆ ಎಂದರು.
ಸಚಿವ ಸ್ಥಾನ ಸಿಕ್ಕ ಬಳಿಕ ರೆಡ್ಡಿ ಬಣದಿಂದ ದೂರ ಸರಿದಿದ್ದೇನೆ ಎಂಬುದು ಸರಿಯಲ್ಲ. ಸಂಪುಟ ಸೇರುವ ಎಲ್ಲ ಅರ್ಹತೆ ನನ್ನಲ್ಲಿದೆ. ಆ ಕಾರಣದಿಂದಲೇ ಯಡಿಯೂರಪ್ಪ ಅವಕಾಶ ನೀಡಿದ್ದಾರೆ. ಶಾಸಕ ಮಿತ್ರರಿಗೂ ಅವಕಾಶ ಸಿಗಬೇಕು ಎಂಬ ಆಸೆ ಇದೆ. ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ ಎಂದು ರೇಣುಕಾಚಾರ್ಯ ಹೇಳಿದರು.