ನಕಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಸೆರೆ
ತಾನು ಲೋಕಾಯುಕ್ತ ಇನ್ಸ್ಪೆಕ್ಟರ್. ಕಳೆದ ನಾಲ್ಕೈದು ದಿನದಿಂದ ನಿಮ್ಮ ಮೇಲೆ ನಿಗಾ ಇಟ್ಟಿದ್ದೇನೆ. ನಿಮಗೆ ನಾಲ್ಕೈದು ಮನೆಗಳಿವೆ. ನಾಳೆ ಬೆಂಗಳೂರಿನಿಂದ ಲೋಕಾಯುಕ್ತ ದಾಳಿ ತಂಡ ಬಂದು ದಾಳಿ ಮಾಡಲಿದೆ.
ಇದನ್ನು ತಪ್ಪಿಸಬೇಕಾದರೆ ನಾಲ್ಕು ಬಾಕ್ಸ್ ಸ್ಕಾಚ್ ವಿಸ್ಕಿ ನೀಡಬೇಕು ಹಾಗೂ50 ಸಾವಿರ ರು. ನಗದು ಹಣವನ್ನು ಕೊಡಬೇಕೆಂದು ಮೂಲತಃ ಸಿವಿಲ್ ಕಂಟ್ರಾಕ್ಟರ್ ಆಗಿರುವ ಶ್ರೀನಿವಾಸ್ ಅಬಕಾರಿ ಇಲಾಖೆಯ ಪ್ರಭಾರ ಮ್ಯಾನೇಜರ್ ರಾಧಾಬಾಯಿಯವರಿಗೆ ಬ್ಲಾಕ್ಮೇಲ್ ಮಾಡುತ್ತಿದ್ದ.
ಅನುಮಾನ ಬಂದ ಮಹಿಳಾ ಅಧಿಕಾರಿ ರಾಧಾಬಾಯಿ ಕೋಟೆ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಸಂತ್ಕುಮಾರ್ರವರಿಗೆ ಮಾಹಿತಿ ನೀಡಿದರು. ಇವರ ನಿರ್ದೇಶನದಂತೆ ನಕಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಶ್ರೀನಿವಾಸ್ನನ್ನು ರಾಧಾಬಾಯಿಯವರು ನೆಹರು ಕ್ರೀಡಾಂಗಣಕ್ಕೆ ಬರಲು ತಿಳಿಸಿದ್ದಾರೆ.
ಅಲ್ಲಿ ಹಣ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಭರವಸೆಯನ್ನು ಪಡೆದುಕೊಂಡ ನಕಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಶ್ರೀನಿವಾಸ್ ನೆಹರು ಕ್ರೀಡಾಂಗಣಕ್ಕೆ ಬಂದು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹೆಚ್ಚಿನ ತನಿಖೆ ಮುಂದುವರೆದಿದೆ.