ಗಣಿಕೆಯರ ಹಣಕ್ಕೆ ಕೈ ಹಾಕಿದ ಪತ್ರಕರ್ತನ ಸೆರೆ
ವೇಶ್ಯೆಯರ ಹಣಕ್ಕೆ ಕೈ ಹಾಕಿದ ಗ್ಯಾಂಗ್ ನ ಮುಖಂಡ ಸಂಪಾದಕ ವಿಎಂ ಗಿರಿ ಸೇರಿದಂತೆ ವೆಂಕಟೇಶ, ರಾಜೇಂದ್ರ ಎಂಬುವವರನ್ನು ಬಂಧಿಸಲಾಗಿದ್ದು, ಹರೀಶ್ ಎನ್ನುವ ಇನ್ನೊಬ್ಬ ಆರೋಪಿ ಸಿಕ್ಕಿಲ್ಲ ಎಂದು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಜಗದೀಶ್ ಹೇಳಿದರು.
ಈ ಲೂಟಿ ಗ್ಯಾಂಗ್ ನಿಂದ ರಿವಾಲ್ವರ್ ಹೊಚ್ಚ ಹೊಸ ಕಾಟ್ರಿಡ್ಜ್ , ಕಾರು, ಮೊಬೈಲ್ ಫೋನ್, ಕೆಮೆರಾ, 2,500 ರು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇಡೀ ಪ್ರಕರಣ ಬೆಳಕಿಗೆ ಬಂದಿದ್ದು ಇಂಟರ್ ನೆಟ್ ಕೆಫೆಯ ಮೂಲಕ.
ಲೂಟಿ ಗ್ಯಾಂಗ್ ಸೆ ಹಿಂದಿನ ಕಥೆ: ಹೇಮಂತ್ ಎಂಬುವವನು ನಡೆಸುತ್ತಿರುವ ಇಂಟರ್ ನೆಟ್ ಪಾರ್ಲರ್ ಗೆ ನುಗ್ಗಿದ್ದ ಕನ್ನಡಪರ ಹೋರಾಟಗಾರರು ಹಾಗೂ ಟಾಬ್ಲೈಡ್ ಸಂಪಾದಕರ ತಂಡ, ಹೇಮಂತ್ ಅವರನ್ನು ಹಣ ಕೊಡುವಂತೆ ಪೀಡಿಸತೊಡಗಿತು. ಕಾರಣ ಕೇಳಿದರೆ, ನೀನು ವೇಶ್ಯಾಗಾರಿಕೆ ನಡೆಸುತ್ತಿದ್ದೀಯಾ, ಇದನ್ನೆಲ್ಲಾ ಬಯಲಿಗೆಳೆದು ಪೇಪರ್ ನಲ್ಲಿ ಹಾಕಿ ಮಾನ ಕಳೆಯುತ್ತೀವಿ. ಸುಮ್ನೆ 25 ಸಾವಿರ ದುಡ್ಡು ಕೊಟ್ಟು ಮಾನ ಉಳಿಸಿಕೋ ಎಂದಿದ್ದಾರೆ.
ನಿಗೂಢ ಸ್ಥಳದಲ್ಲಿ ತಲೆಗೆ ರಿವಾಲ್ವರ್ ನ ತುದಿ ತಾಗಿದಾಗ ಬೆಚ್ಚಿಬಿದ್ದ ಹೇಮಂತ್, ನನ್ನ ಬಳಿ ಸದ್ಯಕ್ಕೆ 2,500 ಸಾವಿರ ಇದೆ ಮಿಕ್ಕಿದ್ದು ಆಮೇಲೆ ಕೊಡುತ್ತೀನಿ ಎಂದು ಬೇಡಿದ್ದಾನೆ. ಆದ್ರೆ ಹೇಮಂತ್ ಬಳಿ ಇದ್ದ ದುಡ್ಡು, ಮೊಬೈಲ್ ಫೋನ್ ಕಸಿದುಕೊಂಡ ಲೂಟಿ ಗ್ಯಾಂಗ್ ಆತನನ್ನು ಸುಮ್ಮನೆ ಬಿಟ್ಟಿದ್ದಾರೆ.
ಜೀವ ಉಳಿದ ಸಂತೋಷದಲ್ಲಿ ಹೇಮಂತ ಅಲ್ಲಿಂದ ನೇರವಾಗಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ಬಂದು ತನ್ನ ಕಷ್ಟ ಹೇಳಿಕೊಂಡಿದ್ದಾನೆ. ಹೇಮಂತನನ್ನು ಬಳಸಿಕೊಂಡು ಸಬ್ ಇನ್ಸ್ ಪೆಕ್ಟರ್ ಜಗದೀಶ್ ನೇತೃತ್ವದ ತಂಡ ಲೂಟಿ ಗ್ಯಾಂಗ್ ಅನ್ನು ಸೆರೆಹಿಡಿದಿದ್ದಾರೆ.
ಟ್ಯಾಬ್ಲೈಡ್ ವೊಂದರ ಸಂಪಾದಕ ಎಂದು ಹೇಳಿಕೊಳ್ಳುವ ಗಿರಿ, ವೇಶ್ಯಾಗೃಹಗಳಿಗೆ ತೆರಳಿ ಅಲ್ಲಿದ್ದ ಗಣಿಕೆಯರು, ವಿಟರನ್ನು ಹೆದರಿಸಿ, ನಿಮ್ಮ ಸುದ್ದಿ ಹೊರಕ್ಕೆ ಬರಬಾರದು ಎಂದರೆ ದುಡ್ಡು ಕೊಡಿ ಎಂದು ಹೇಳಿ ಆಗಾಗ ದುಡ್ಡು ವಸೂಲಿ ಮಾಡುತ್ತಿದ್ದ. ಇವನ ಕಾಟಕ್ಕೆ ಹೆದರಿ ಹೇಮಂತ್ ತಮ್ಮ ಪತ್ನಿಯ 31 ಸಾವಿರ ಬೆಲೆಯ ಒಡವೆಗಳನ್ನು ಗಿರಿಗೆ ಒಪ್ಪಿಸಿದ್ದಾರೆ ಕೂಡಾ.
ಅನೈತಿಕ ಚಟುವಟಿಕೆಗಳ ತಾಣ, ವೇಶ್ಯಾಗೃಹ, ಜೂಜು ಅಡ್ಡಾಗಳನ್ನು ಸುಲಭವಾಗಿ ಟಾರ್ಗೆಟ್ ಮಾಡುತ್ತಿದ್ದ ಗಿರಿ, ಪತ್ರಕರ್ತನ ಸೋಗಿನಲ್ಲಿ ಎಲ್ಲರನ್ನು ಬೆದರಿಸಿ ಹಣ ಪಡೆಯುತ್ತಿದ್ದ. ಇವನಿಂದ ಬೇಸತ್ತವರು ಕೂಡಾ ಅಕ್ರಮ ಮಾರ್ಗದಲ್ಲಿ ನಡೆಯುತ್ತಿರುವ ಕಾರಣ ಯಾರೊಬ್ಬರೂ ಈವರೆಗೂ ದೂರು ನೀಡಿರಲಿಲ್ಲ ಎಂದು ಸಬ್ ಇನ್ಸ್ ಪೆಕ್ಟರ್ ಜಗದೀಶ್ ಹೇಳುತ್ತಾರೆ.