ಉಗ್ರಪ್ಪನವರೇ ನಾಲಿಗೆ ಬಿಗಿ ಹಿಡಿದು ಮಾತಾಡಿ
ಬುಧವಾರ ಮಾಧ್ಯಮಗೋಷ್ಠಿ ನಡೆಸಿದ ಧನಂಜಯಕುಮಾರ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬ ಬೇಲೇಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದೆ ಎಂಬ ಉಗ್ರಪ್ಪ ಅವರ ಹೇಳಿಕೆಯನ್ನು ನಿರಾಕರಿಸಿದ್ದು, ತೀವ್ರವಾಗಿ ಖಂಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉಗ್ರಪ್ಪ ಅವರ ವರ್ತನೆ ಹದ್ದುಮೀರಿದೆ. ಸರಕಾರದ ವಿರುದ್ದ ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ತೀವ್ರ ಅಕ್ರೋಶ ವ್ಯಕ್ತಪಡಿಸಿದರು. ಅವರ ವರ್ತನೆ ಹೀಗೆ ಮುಂದುವರೆದರೆ, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಹಿಂಜರಿಯುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ವೇದಿಕೆ ಸಿಕ್ಕರೆ ಉಗ್ರಪ್ಪ ಅವರ ಮಾತುಗಳು ಮೇರೆಯನ್ನು ಮೀರುತ್ತವೆ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬೇಲೇಕೇರಿ ಅದಿರು ಪ್ರಕರಣದಲ್ಲಿ ವಿನಾಕಾರಣ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಕುಟುಂಬವನ್ನು ಎಳೆದು ತರುತ್ತಿರುವುದು ಖಂಡನೀಯ ಕೆಲಸ.
ಪ್ರಕರಣವನ್ನು ಈಗಾಗಲೇ ಲೋಕಾಯುಕ್ತಕ್ಕೆ ವಹಿಸಲಾಗಿದೆ. ತನಿಖೆ ನಡೆದು ವರದಿ ಬಂದ ನಂತರ ಯಾರು ಭಾಗಿಯಾಗಿದ್ದಾರೆ ಎನ್ನುವುದು ತಿಳಿದುಬರಲಿದೆ. ಅದಕ್ಕೂ ಮುಂಚಿತವಾಗಿ ಉಗ್ರಪ್ಪ ತಮಗೆ ತಿಳಿದಂತೆ ಮಾತನಾಡುವುದು ಸರಿಯಲ್ಲ. ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ ಅವರು ಉಗ್ರಪ್ಪ ಅವರ ಬಾಯಿ ಬೀಗ ಹಾಕಿದರೆ ಉತ್ತಮ ಎಂದು ಧನಂಜಯಕುಮಾರ ಕಿವಿಮಾತು ಹೇಳಿದರು.