ಸೋನಿಯಾ ಮುಂದೆ ಗಡಿ ಸಮಸ್ಯೆ ಬಿಚ್ಚಿಟ್ಟ ಚವ್ಹಾಣ್
ನವದೆಹಲಿ, ಜು. 17 : ಕರ್ನಾಟಕದ ಅಕ್ರಮ ಗಣಿಗಾರಿಕೆಯ ತಲೆನೋವು ಹೊತ್ತು ಬಿಜೆಪಿ ಹಿರಿಯರ ಮುಂದೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಕೂತಿರುವ ಹೊತ್ತಿನಲ್ಲೇ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಸಮಸ್ಯೆಯ ಮೂಟೆಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮುಂದೆ ಬಿಚ್ಚಿಟ್ಟಿದ್ದಾರೆ.
ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರ ದಂಡನ್ನು ಕಟ್ಟಿಕೊಂಡು ಸೋನಿಯಾ ಅವರನ್ನು ಭೇಟಿ ಮಾಡಿದ ಚವ್ಹಾಣ್, ಗಡಿ ಸಮಸ್ಯೆಗೆ ಕಾರಣವಾಗಿರುವ ಅಂಶಗಳನ್ನು ಅರುಹಿದ್ದಾರೆ. ಹೆಚ್ಚು ಮರಾಠಿಗರಿರುವ ಕರ್ನಾಟಕದ ಪ್ರಾಂತ್ಯಗಳನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ದುಂಬಾಲು ಬಿದ್ದಿರುವ ಚವ್ಹಾಣ್, ಈ ವಿಷಯವನ್ನು ಸೋನಿಯಾ ಮುಂದೆ ಹೇಳಿಲ್ಲ. ಸೋನಿಯಾ ಅವರನ್ನು ಭೇಟಿಯಾಗುವ ಮೊದಲು ನಿಯೋಗ ಪ್ರಧಾನಿಯನ್ನೂ ಭೇಟಿ ಮಾಡಿದೆ.
ಮರಾಠಿ ಭಾಷೆಯನ್ನು ಹೆಚ್ಚು ಮಾತಾಡುವ ಕರ್ನಾಟಕದ 865 ಹಳ್ಳಿಗಳನ್ನು ಕೇಂದ್ರಾಡಳಿತದ ವ್ಯಾಪ್ತಿಯಲ್ಲಿ ತರಬೇಕೆನ್ನುವುದು ಅಶೋಕ್ ಚವ್ಹಾಣ್ ಅವರ ಆಗ್ರಹ. ಅಲ್ಲದೆ, ಕರ್ನಾಟಕದಲ್ಲಿ ಮರಾಠಿಗರು ದಬ್ಬಾಳಿಕೆಗೊಳಗಾಗುತ್ತಿದ್ದು, ಮಾನವ ಹಕ್ಕು ಆಯೋಗ ಈ ಪ್ರದೇಶಗಳನ್ನು ಸಂದರ್ಶಿಸಬೇಕು ಎಂದು ಕೇಳಿಕೊಂಡಿದ್ದಾರೆ. ಮರಾಠಿಗರ ರಕ್ಷಣೆಗೆ ಕರ್ನಾಟಕ ಸರಕಾರ ಮುಂದಾಗದಿದ್ದರೆ ಕೇಂದ್ರ ಮಧ್ಯ ಪ್ರವೇಶಿಸಬೇಕು ಎಂದೂ ಅವರು ಮನವಿ ಮಾಡಿದ್ದಾರೆ.
ಗಡಿ ವಿವಾದದಲ್ಲಿ ಸೇರಿಕೊಂಡಿರುವ ಕರ್ನಾಟಕದ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವುದು ಸಾಧ್ಯವಿಲ್ಲವೆಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿನಲ್ಲಿ ಅಫಿಡವಿಟ್ ಸಲ್ಲಿಸಿರುವುದು ಮಹಾರಾಷ್ಟ್ರಕ್ಕೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ.