ಕನ್ನಡಿಗರ ಮೇಲೆ ಪ್ರತೀಕಾರ : ಬಾಳಾ ಠಾಕ್ರೆ
ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆದಿರುವ ಅವರು, ಬೆಳಗಾವಿ ಸೇರಿದಂತೆ ಗಡಿಯಲ್ಲಿ ಮರಾಠಿ ಭಾಷಿಕರ ಮೇಲೆ ಅನ್ಯಾಯವಾದರೆ ಸಹಿಸುವುದಿಲ್ಲ. ಮುಂಬೈಯಲ್ಲಿ ಅಪಾರ ಕನ್ನಡಿಗರಿದ್ದಾರೆ. ಅವರ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕರ್ನಾಟಕದಲ್ಲಿನ ಮರಾಠಿಗರ ಮೇಲೆ ಅನ್ಯಾಯ, ದೌರ್ಜನ್ಯ ಸತತವಾಗಿ ಮುಂದುವರಿದರೆ ಕನ್ನಡಿಗರ ಮೇಲೆ ದಾಳಿಗೆ ಆಹ್ವಾನ ನೀಡದಂತೆ, ಕರ್ನಾಟಕದಲ್ಲಿ ಮರಾಠಿಗರನ್ನೇ ಗುರಿ ಮಾಡಲಾಗುತ್ತಿದೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದೆಲ್ಲೆಡೆ ಕನ್ನಡಿಗರು ನೆಲೆಸಿದ್ದಾರೆ ಎನ್ನುವ ಸತ್ಯವನ್ನು ಯಡಿಯೂರಪ್ಪ ಮರೆಯಬಾರದು.
ನಿಮ್ಮಂತೆ ನಾವು ಬೀದಿಗಿಳಿದರೆ ಕನ್ನಡ ಜನತೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸದ್ಯ ನಾನು ತಾಳ್ಮೆ ಕಳೆದುಕೊಂಡಿಲ್ಲ. ನಮ್ಮ ತಾಳ್ಮೆ ಮೀರಿದಲ್ಲಿ ಶಾಂತಿಗೆ ಹೆಸರಾಗಿರುವ ಮರಾಠಿಗರು ಸುಮ್ಮನಿರಲಾರರು. ಮರಾಠಿ ಪ್ರಾಬಲ್ಯದ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವ ಪಟ್ಟನ್ನು ಸಡಿಲಿಸುವ ಪ್ರಶ್ನೆಯೇ ಇಲ್ಲ ಎಂದು ಬಾಳಾ ಠಾಕ್ರೆ ಹೇಳಿದ್ದಾರೆ.