ಎಚ್ಡಿಕೆ ಹೇಳಿಕೆ, ಬಿಜೆಪಿ ನಾಯಕರ ವಾಕ್ ಔಟ್
ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕುಮಾರಸ್ವಾಮಿ ಮಾತನಾಡುತ್ತಾ, ಎಂಪಿ ಪ್ರಕಾಶ್ ಅವರು ನನಗೆ ತಂದೆ ಸಮಾನರು. ವೇದಿಕೆಯಲ್ಲಿ ಜನತಾ ಪರಿವಾರದ ನಾಯಕರಿದ್ದಾರೆ. ಆದರೆ ಈಶ್ವರಪ್ಪ ಮತ್ತು ರಾಮಚಂದ್ರ ಗೌಡ ಬೇರೆಯವರು. ಹೀಗಾಗಿ ನನ್ನ ಭಾವನೆಯನ್ನು ಮುಕ್ತವಾಗಿ ಹೇಳಿಕೊಳ್ಳಲು ಆಗುವುದಿಲ್ಲ. 2007ರಿಂದ ಇತ್ತೀಚಿಗೆ ಭಯೋತ್ಪಾದಕ ಚಟುವಟಿಕೆಗಳ ಪೈಕಿ ಏಳರಲ್ಲಿ ಹಿಂದೂ ಸಂಘಟನೆಗಳ ಕೈವಾಡವಿದೆ ಎಂದು ಔಟ್ ಲುಕ್ ಪತ್ರಿಕೆ ವರದಿ ಮಾಡಿದೆ ಎಂದು ಆರ್ಎಸ್ಎಸ್ ಹೆಸರು ಪ್ರಸ್ತಾಪ ಮಾಡಿದರು. ಇದರಿಂದ ಸಿಡಿಮಿಡಿಗೊಂಡ ಈಶ್ವರಪ್ಪ ಮತ್ತು ರಾಮಚಂದ್ರ ಗೌಡ ಆಕ್ಷೇಪಿಸಿದರು. ಕೆಲ ಸಭಿಕರು ಕೂಡ ಈ ವಿಚಾರ ಬೇಡವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರಿಂದ ವಿಚಲಿತರಾದ ಎಚ್ಡಿಕೆ, ಈಶ್ವರಪ್ಪ ಅವರೇ ಸಾರಿ ಎಂದು ಕ್ಷಮೆ ಯಾಚಿಸಿದರು. ಇದಕ್ಕೆ ಸ್ಪಂದಿಸದ ಇಬ್ಬರೂ ಬಿಜೆಪಿ ನಾಯಕರುಗಳು ಪ್ರಕಾಶ್ ಅವರಿಗೆ ಅಭಿನಂದಿಸಿ, ಪೇಜಾವರ ಶ್ರೀಗಳಿಗೆ ನಮಸ್ಕರಿಸಿ ಸಭೆಯಿಂದ ಹೊರ ನಡೆದರು. ಸಭೆಯಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ವಿದೇಶಾಂಗ ಸಚಿವ ಎಸ್ಎಂ ಕೃಷ್ಣ, ಆರ್ ವಿ ದೇಶಪಾಂಡೆ, ಪಿಜಿಆರ್ ಸಿಂಧ್ಯಾ ಮುಂತಾದವರು ಭಾಗವಹಿಸಿದ್ದರು.
ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಪೇಜಾವರ ಶ್ರೀಗಳು, ಹಿಂದೂಗಳ ಭಯೋತ್ಪಾದನೆ ಆತಂಕಕಾರಿ. ಆದರೆ ಈಗ ನಡೆಯುತ್ತಿರುವುದು ಮುಸ್ಲಿಂ ಭಯೋತ್ಪಾದನೆ. ಹಿಂದೂಗಳ ಬಗ್ಗೆ ಆಕ್ಷೇಪ ಎತ್ತುವ ಚಿಂತಕರು ಮತ್ತು ರಾಜಕಾರಿಣಿಗಳು ಮುಸ್ಲಿಂ ಭಯೋತ್ಪಾದನೆ ಕುರಿತೂ ಅಷ್ಟೇ ಗಟ್ಟಿಯಾಗಿ ಮಾತನಾಡಬೇಕು. ಸಣ್ಣ ಪ್ರಮಾಣದಲ್ಲಿ ಹಿಂದೂ ಭಯೋತ್ಪಾದನೆ ನಡೆದಿರಬಹುದು. ಆದರೆ ಅದು ದೊಡ್ಡದಾಗಲು ಬಿಡಬಾರದು. ನಾನು ಲೋಹಿಯಾ ಮತ್ತು ಜೆಪಿ ಅವರ ತತ್ವದಿಂದ ಆಕರ್ಷಿತನಾದವ, ಗಾಂಧಿವಾದಿ ಜೊತೆಗೆ ಹಿಂದುತ್ವವೂ ಇದೆ ಎಂದು ಹೇಳಿಕೆ ನೀಡಿದಾಗ ಕುಮಾರಸ್ವಾಮಿ ಕೂತಲ್ಲಿಂದಲೇ ಶ್ರೀಗಳಿಗೆ ಪ್ರಣಾಮ ಸಲ್ಲಿಸಿದರು.