ಆರ್ಥಿಕ ದುರ್ಬಲರಿಗೆ ಮೀಸಲಾತಿ : ಬ್ರಾಹ್ಮಣ ಸಭಾ
ಬರೀ ಜಾತಿ ಆಧರಿಸಿ ಮೀಸಲಾತಿ ನೀಡುವುದರಿಂದ ಸಮಾಜದಲ್ಲಿರುವ ಉಳಿದ ಜನಾಂಗಗಳ ಬಡವರಿಗೆ ಅನ್ಯಾಯವಾಗುತ್ತಿದೆ. ಅಲ್ಲದೇ ಜಾತಿ ಹೆಸರಿನಲ್ಲಿ ಕೆಲವು ನಿರ್ದಿಷ್ಟ ಜಾತಿಯ ಪ್ರಬಲರಿಗೆ ಮಾತ್ರ ಈ ಮೀಸಲಾತಿ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದು, ಮೀಸಲಾತಿಗೆ ಒಳಪಟ್ಟಿರುವ ಸಮುದಾಯದ ಎಲ್ಲ ಬಡವರಿಗೂ ಇದರ ಉಪಯೋಗವಾಗುತ್ತಿಲ್ಲ ಎಂದು ಅಖಿಲ ಭಾರತ ಬ್ರಾಹ್ಮಣ ಮಹೇಶ್ ದತ್ತ ಶರ್ಮಾ ಆರೋಪಿಸಿಸಿದ್ದಾರೆ.
ಜಾತಿ ಆಧರಿತ ಮೀಸಲಾತಿ ಕಾನೂನು ಎನ್ನುವುದೇ ಸಮಾಜವಿರೋಧಿ ಕಾನೂನು. ಜಾತಿ ಆಧರಿಸಿ ಮೀಸಲಾತಿ ನೀಡುವುದರಿಂದ ಜಾತಿ ಜಾತಿಗಳಲ್ಲಿ ವಿನಾಕಾರಣ ಕಲಹ ಉಂಟಾಗುತ್ತವೆ. ಮೇಲು ಕೀಳು ಎಂಬ ಭಾವನೆ ಬೆಳೆಯಲು ಮೀಸಲಾತಿ ಆಸ್ಪದ ನೀಡುತ್ತದೆ. ಹೀಗಾಗಿ ಜಾತಿ ಮೀಸಲಾತಿ ಬದಲು ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ಶರ್ಮಾ ಆಗ್ರಹಿಸಿದ್ದಾರೆ. ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಮೀಸಲಾತಿ ಕಾನೂನು ಜಾರಿಗೆ ತರಬೇಕು ಎಂದು ಮುಂದಿನ ದಿನಗಳಲ್ಲಿ ಮಹಾಸಭಾ ಹೋರಾಟ ನಡೆಸಲಿದೆ ಎಂದು ಅವರು ವಿವರಿಸಿದರು.
ಎಲ್ಲ ಜಾತಿಗಳಲ್ಲಿ ಬಡವರು ಇದ್ದಾರೆ. ಮೇಲ್ವರ್ಗ ಎಂದು ಹೇಳಲಾಗುತ್ತಿರುವ ಬ್ರಾಹ್ಮಣ ಸಮುದಾಯದಲ್ಲೇ ಈಗಲೂ ಅನೇಕ ಕುಟುಂಬಗಳು ಬಡತನದಿಂದ ತತ್ತರಿಸುತ್ತಿವೆ. ಇದು ಬ್ರಾಹ್ಮಣ ಸಮುದಾಯದ ಸಮಸ್ಯೆಯೊಂದೇ ಅಲ್ಲ ಮೇಲ್ವರ್ಗ ಎನಿಸಿರುವ ಎಲ್ಲ ಜಾತಿಗಳಲ್ಲಿ ಬಡತನ ಕಿತ್ತು ತಿನ್ನುತ್ತಿದೆ. ಹೀಗಾಗಿ ಇದನ್ನು ಹೋಗಲಾಡಿಸಲು ಸರಕಾರ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಕಾನೂನು ಜಾರಿಗೆ ತರುವುದು ಒಳಿತು ಎಂದು ಶರ್ಮಾ ಹೇಳಿದ್ದಾರೆ.