ಗಂಡನ ಕೊಲೆಗೆ ಮಂತ್ರವಾದಿ ಮೊರೆಹೋದ ಹೆಂಡತಿ
ಘಟನೆಯ ವಿವರ : ರಾಜು ಎಂಬಾತನಿಗೆ ಸೇರಿದ ಮನೆಯಲ್ಲಿ ನಿನ್ನೆ ದಿನ ರಾತ್ರಿ ಈತನ ಹೆಂಡತಿ ಪುಷ್ಪ ಎಂಬಾಕೆಯೇ ಈ ಕೃತ್ಯ ನಡೆಸಲು ಮುಂದಾಗಿದ್ದು, ಇದಕ್ಕಾಗಿ ಆಂಧ್ರಪ್ರದೇಶದಿಂದ ಮಂತ್ರವಾದಿಗಳಾದ ನರೇಂದ್ರ ಹಾಗೂ ಮೂರ್ತಿ ಎಂಬಿಬ್ಬರನ್ನು ಕರೆಸಿಕೊಂಡು ನರಬಲಿ ನೀಡುವ ಉದ್ದೇಶದಿಂದಲೇ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಳು.
ಇದಕ್ಕಾಗಿ ಮನೆಯ ಹಿಂಭಾಗದ ಜಾಗದಲ್ಲಿ 7 ಅಡಿ ಆಳ ಹಾಗೂ ಸುಮಾರು 5 ಅಡಿ ಉದ್ದದ ಗುಂಡಿಯನ್ನು ತೋಡಿದ್ದು, ಮನೆಯೊಳಗಡೆ ಇದಕ್ಕಾಗಿ ಸಕಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡು, ಬಲಿಕೊಡುವ ಉದ್ದೇಶಕ್ಕಾಗಿಯೇ ಮಚ್ಚೊಂದಕ್ಕೆ ನಿಂಬೆಹಣ್ಣೊಂದನ್ನು ಮಂತ್ರಿಸಲಾಗಿದೆ.
ಪುಷ್ಪಳ ಗಂಡನಾಗಿರುವ ರಾಜುವಿಗೆ 4 ಲಕ್ಷದಷ್ಟು ಆಸ್ತಿಯಿದ್ದು, ಆಸ್ತಿಯನ್ನು ಕಬಳಿಸುವ ಉದ್ದೇಶದಿಂದಲೇ ಈ ರೀತಿಯ ಸಂಚನ್ನು ಮಾಡಿರುವುದಾಗಿ ಸಂದೇಹ ವ್ಯಕ್ತಪಡಿಸಲಾಗಿದೆ. ಅಮಾವಾಸ್ಯೆ ಭಾನುವಾರ ಇರುವುದರಿಂದ ಶುಕ್ರವಾರ ರಾತ್ರಿಯೇ ಆಕೆಯ ಗಂಡ ರಾಜುನನ್ನು ಬಲಿಕೊಡಲು ಸಂಚು ರೂಪಿಸಲಾಗಿತ್ತು.
ಈ ಬಗ್ಗೆ ರಾಜುವಿನ ತಮ್ಮನಾದ ರವಿ ಎಂಬಾತ ಪ್ರತಿಕ್ರಿಯಿಸಿ, ಹತ್ತು ಜನರ ತಂಡ ಅಣ್ಣನ ಮನೆಯ ಹಿಂಭಾಗದಲ್ಲೇ ಇರುವ ನನ್ನ ಮನೆಯ ಬಾಗಿಲ ಹತ್ತಿರ ಬಂದು, ಹೊರಬರುವಂತೆ ಕರೆದರು. ರಾತ್ರಿಯ ವೇಳೆಯಾದ್ದರಿಂದ ಹೊರಬರಲು ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ಪಕ್ಕದಲ್ಲಿಯೇ ಇದ್ದ ಜಾಗದಲ್ಲಿ ಸೀರೆಯನ್ನು ಕಟ್ಟಿ, ಗುಂಡಿ ತೋಡುತ್ತಿರುವುದು ಗಮನಕ್ಕೆ ಬಂದು ಇದರಲ್ಲಿ ಏನೋ ದುರುದ್ದೇಶ ಅಡಗಿದೆ ಎಂಬ ಸಂಶಯದಿಂದ ಹೆದರಿ ಹೊರಗೆ ಬರಲಿಲ್ಲ ಎಂದಿದ್ದಾನೆ.
ಕೊಲೆ ಮಾಡುವ ಸಂಚು ಅರಿವಿಗೆ ಬಂದು ಗ್ರಾಮಸ್ಥರು ಮಂತ್ರವಾದಿಗಳು ಹಾಗೂ ಘಟನೆಗೆ ಸಹಕರಿಸುತ್ತಿದ್ದ ಎಂಟರಿಂದ ಹತ್ತು ಜನರನ್ನು ಹಿಡಿಯಲು ಯತ್ನಿಸಿದಾಗ ಅದರಲ್ಲಿ ಮಂತ್ರವಾದಿಗಳಿಬ್ಬರು ಸಿಕ್ಕಿಬಿದ್ದಿದ್ದಾರೆ. ನಂತರ ಘಟನೆಯ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿ ವಿಷಯವನ್ನು ತಿಳಿಸಿದಾಗ ಪೊಲೀಸರು ತಕ್ಷಣಕ್ಕೆ ಬಂದು ಮಂತ್ರವಾದಿಗಳನ್ನು ಹಾಗೂ ಘಟನೆಗೆ ಕಾರಣಕರ್ತೆಯಾದ ರವಿಯ ಅತ್ತಿಗೆಯನ್ನು ಬಂಧಿಸಿದ್ದಾರೆ.