ಗಡ್ಕರಿಯನ್ನು ಹುಚ್ಚಾಸ್ಪತ್ರೆಗೆ ಸೇರಿಸಿ : ಕಾಂಗ್ರೆಸ್
ಸಂಸತ್ ದಾಳಿಯ ಪ್ರಮುಖ ಆರೋಪಿ ಅಫ್ಜರ್ ಗುರುವನ್ನು ಅಳಿಯನಂತೆ ನೋಡಿಕೊಳ್ಳುವುದನ್ನು ನಿಲ್ಲಿಸಿ ಎಂದು ಗುರುವಾರ ನಿತಿನ್ ಗಡ್ಕರಿ ಗುಡುಗಿದ್ದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಬಿಜೆಪಿ ನಾಯಕನ ಮೇಲೆ ವಾಗ್ದಾಳಿ ಮಾಡಿದೆ. ಗಡ್ಕರಿ ಕಾಂಗ್ರೆಸ್ಸಿನ ಕ್ಷಮೆ ಕೇಳಬೇಕೆಂದು ಆಗ್ರಹಿಸಿದೆ.
ಇದೊಂದು ನಾಚಿಕೆಗೇಡಿನ ಹೇಳಿಕೆ. ಒಂದು ರಾಷ್ಟ್ರೀಯ ಪಕ್ಷದ ನಾಯಕನಾಗಲಿಕ್ಕೆ ಗಡ್ಕರಿ ನಾಲಾಯಕ್ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಶಕೀಲ್ ಅಹ್ಮದ್ ಕೂಡ ಕೆಂಡ ಕಾರಿದ್ದಾರೆ.
ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸುವುದಕ್ಕೆ ತಡವಾಗುತ್ತಿರುವುದಕ್ಕೆ ಕಿಡಿ ಕಾರಿದ್ದ ಗಡ್ಕರಿ, "ಅಫ್ಜಲ್ ಗುರುವೇನು ನಿಮ್ಮ ಅಳಿಯನೆ? ಕಾಂಗ್ರೆಸ್ ಅಂಜುತ್ತಿರುವವರ ಪಕ್ಷವಾಗಿದೆ. ಅವರಿಂದ ಭಯೋತ್ಪಾದನೆ ವಿರುದ್ಧ ಹೋರಾಡಲು ಸಾಧ್ಯವೇ ಇಲ್ಲ ಮತ್ತು ಭಯೋತ್ಪಾದನೆ ಅಳಿಸುವುದೂ ಸಾಧ್ಯವಿಲ್ಲ. ಭಯೋತ್ಪಾದಕರಿಗೆ ತಲೆಬಾಗುವ ಕಾಂಗ್ರೆಸ್ಸಿನಿಂದ ಭಾರತದ ರಕ್ಷಣೆ ಸಾಧ್ಯವಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್ ವಕ್ತಾರರ ಹೇಳಿಕೆ ಪ್ರತಿಯಾಗಿ, ನನ್ನ ಹೇಳಿಕೆಯಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಗಡ್ಕರಿ ಉತ್ತರ ನೀಡಿದ್ದಾರೆ.
ಡಿಸೆಂಬರ್ 13, 2001ರಂದು ಭಾರತದ ಸಂಸತ್ತಿನ ಮೇಲೆ ನಡೆಸಿದ ದಾಳಿಯ ಆರೋಪ ಹೊತ್ತಿದ್ದ ಅಫ್ಜಲ್ ಗುರುವಿಗೆ ದೆಹಲಿ ಹೈಕೋರ್ಟ್ ಡಿಸೆಂಬರ್ 18, 2002ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ 2005ರಲ್ಲಿ ತಳ್ಳಿಹಾಕಿತ್ತು. ಆ ದಾಳಿಯಲ್ಲಿ ಐವರು ಉಗ್ರರು, ಆರು ಜನ ಪೊಲೀಸರು ಮತ್ತು ಓರ್ವ ನಾಗರಿಕ ಹತರಾಗಿದ್ದರು.