ಮೇಲ್ಮನೆಯಲ್ಲೂ ಗೋಹತ್ಯೆ ವಿಧೇಯಕ ಅಂಗೀಕಾರ
ಪಶು ಸಂಗೋಪನಾ ಸಚಿವ ರೇವುನಾಯಕ ಬೆಳಮಗಿ ಗುರುವಾರ ಮೇಲ್ಮನೆಯಲ್ಲಿ ಪ್ರಸ್ತಾಪಿಸಿದ ಈ ನೂತನ ವಿಧೇಯಕಕ್ಕೆ ಪ್ರಸ್ತಾವನೆಯ ಪರ 27 ಹಾಗೂ ವಿರೋಧವಾಗಿ 23 ಮತಗಳು ಚಲಾಯಿಸಲ್ಪಟ್ಟವು.
ಆಚಾರ್ಯ Vs ಮೋಟಮ್ಮ ಗದ್ದಲ:ವಿಧೇಯಕ ಅಂಗೀಕರಿಸಲ್ಪಟ್ಟ ಬಳಿಕ ವಿಪಕ್ಷಗಳ ಸದಸ್ಯರು ಈ ಕುರಿತ ಚರ್ಚೆಯನ್ನು ಸೋಮವಾರ ತೆಗೆದುಕೊಳ್ಳುವಂತೆ ಸಭಾಪತಿಯವರಿಗೆ ಮನವಿ ಮಾಡಿದರು. ಆದರೆ, ಸಭಾ ನಾಯಕ ಡಾ.ವಿಎಸ್ ಆಚಾರ್ಯ, ಈ ವಿಧೇಯಕದ ಕುರಿತ ಇಂದೇ ಬೇಕಾದರೂ ಚರ್ಚೆಯಾಗಲಿ ಎಂದರು.
2008ರ ಚುನಾವಣೆಯಲ್ಲಿ ತಮ್ಮ ಪಕ್ಷ ಪ್ರಣಾಳಿಕೆಯಲ್ಲಿ ಜನತೆಗೆ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತರುವುದಾಗಿ ಭರವಸೆ ನೀಡಿತ್ತು. ಇದನ್ನು ನಂಬಿಯೇ ಜನ ನಮಗೆ ಮತ ನೀಡಿದ್ದಾರೆ. ಸಂವಿಧಾನದಲ್ಲಿಯೂ ಇದನ್ನೇ ಹೇಳಲಾಗಿದೆ. ಅಧಿಕಾರಕ್ಕಾಗಿ ಅಲ್ಲದಿದ್ದರೂ ದೇಶದ ನಂಬಿಕೆ ಜನಗಳ ಪ್ರೀತಿ ನಮ್ಮ ಮೇಲಿದೆ ಎಂದು ಆಚಾರ್ಯ ಹೇಳಿದರು.
ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕಿ ಮೋಟಮ್ಮ,ಈ ಸರ್ಕಾರಕ್ಕೆ ಜನಗಳ ಮೇಲೆ ಪ್ರೀತಿ ಎಷ್ಟಿದೆ, ದನಗಳ ಮೇಲೆ ಪ್ರೀತಿ ಎಷ್ಟಿದೆ ಎಂಬುದು ಜನತೆಗೆ ಗೊತ್ತಾಗಲಿ ಎಂದು ವಾಗ್ದಾಳಿ ನಡೆಸಿದರು. ದುರುದ್ದೇಶದಿಂದ ತರಲಾಗುತ್ತಿರುವ ಈ ಮಸೂದೆಗೆ ಅಂಬೇಡ್ಕರ್ ಹೆಸರನ್ನೇಕೆ ಬಳಸಿಕೊಳ್ಳುತ್ತೀರಾ ಎಂದು ಹರಿಹಾಯ್ದರು.
ಇದಕ್ಕೆ ಅಷ್ಟೇ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಆಚಾರ್ಯ ಅವರು ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಒಪ್ಪಿಕೊಂಡು ಅವರನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತಿದೆ ಎಂದು ಹೇಳುತ್ತಿದ್ದಂತೆ ಅದೇ ಅಂಬೇಡ್ಕರ್ ಭಾವಚಿತ್ರಗಳಿಗೆ ಚಪ್ಪಲಿ ಹಾರವನ್ನೂ ಹಾಕಿ ಅಪಮಾನ ಮಾಡಲಾಗುತ್ತಿದೆ ಎಂದು ಜರಿದರು.
ಈ ವಿಧೇಯಕ ರೈತರು, ಬಡವರ ವಿರೋಧಿ ಮಸೂದೆ ಎಂದು ಪ್ರತಿಪಕ್ಷಗಳ ಸದಸ್ಯರು ಗದ್ದಲ ನಡೆಸಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರೂ ಎದ್ದು ನಿಂತು ವಿಧೇಯಕವನ್ನು ಸಮರ್ಥಿಸಿಕೊಂಡರು.
ಈ ವಿಧೇಯಕದ ಮೇಲಿನ ಚರ್ಚೆಗೆ ಸೋಮವಾರ ಅವಕಾಶ ನೀಡುವುದಾಗಿ ರೂಲಿಂಗ್ ನೀಡುವ ಮೂಲಕ ಸಭಾಪತಿ ಶಂಕರಮೂರ್ತಿ ಸದನವನ್ನು ಶಾಂತಿಗೊಳಿಸಿದರು.