ಎಂಇಎಸ್ ಪುಂಡಾಟ; ಕರವೇ ಫಲಕಕ್ಕೆ ಬೆಂಕಿ
ಕನ್ನಡಿಗರ ಸ್ವಾಭಿಮಾನಕ್ಕೆ ಕಿಚ್ಚುಹಚ್ಚಿ ಸದಾ ಮುಖಭಂಗ ಅನುಭವಿಸುತ್ತಿರುವ ಎಂಇಎಸ್, ಬೆಳಗಾವಿ ತಾಲೂಕಿನ ಯಲ್ಲೂರು ಗ್ರಾಮ ಪಂಚಾಯತಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ನಿರ್ಣಯ ತೆಗೆದುಕೊಂಡಿದೆ. ಕೇಂದ್ರ ಸಲ್ಲಿಸಿರುವ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಎಂಇಎಸ್ ನ ಮೂರು ಬಣಗಳು ಸಭೆ ಸೇರಿ ಒಮ್ಮತದ ನಿರ್ಧಾರ ತೆಗೆದು ಕೊಳ್ಳುವಲ್ಲಿ ವಿಫಲವಾಗಿ ಸಭೆಯಲ್ಲೇ ವಾಗ್ಯುದ್ಧಕ್ಕೆ ತೊಡಗಿಕೊಂಡಿದೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ ಹಿತಾಶಕ್ತಿ ರಕ್ಷಿಸಲು ವಿಫಲರಾಗಿರುವ ಕೇಂದ್ರದಲ್ಲಿರುವ ರಾಜ್ಯದ ಮೂವರು ಸಚಿವರುಗಳಾದ ಶರದ್ ಪವಾರ್, ಸುಶೀಲ್ ಕುಮಾರ್ ಶಿಂಧೆ ಮತ್ತು ವಿಲಾಸರಾವ್ ದೇಶಮುಖ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಎಂಇಎಸ್ ಒತ್ತಾಯಿಸಿದೆ. ಈ ಮಧ್ಯೆ ಕೇಂದ್ರ ಸರಕಾರ ಮೂರನೇ ಬಾರಿಗೆ ಸುಪ್ರೀಂಕೋರ್ಟ್ ನಲ್ಲಿ ಪ್ರಮಾಣಪತ್ರ ಸಲ್ಲಿಸಿದೆ. ಇದುವರೆಗೂ ಮಹಾರಾಷ್ಟ್ರದ ಒತ್ತಡಕ್ಕೆ ಮಣಿಯುತ್ತಿದ್ದ ಕೇಂದ್ರ ಸರಕಾರ ಈ ಬಾರಿ ರಾಜ್ಯದ ಪರವಾಗಿ ದೃಢ ನಿಲುವು ತಾಳಿರುವುದು ಗಮನಾರ್ಹ.
ಎಂಇಎಸ್ ಪುಂಡಾಟಕ್ಕೆ ಪ್ರತಿಕ್ರಿಯೆ ನೀಡಿದ ಕರವೇ ಅಧ್ಯಕ್ಷ ನಾರಾಯಣ ಗೌಡ,ಎಂಇಎಸ್ ಪುಂಡಾಟಿಕೆಯ ಅಂತ್ಯದ ದಿನಗಳು ಆರಂಭವಾಗಿದೆ. ಇನ್ನು ಮುಂದೆ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂದು ಮನಗಂಡಿರುವ ಕಾರ್ಯಕರ್ತರು ಗಲಭೆ ಸೃಷ್ಟಿಸಲು ಹೊರಟಿದ್ದಾರೆ. ಕರವೇ ಸಂಧರ್ಭಾನುಸಾರ ತಕ್ಕ ಉತ್ತರ ನೀಡಲಿದೆ ಎಂದು ಹೇಳಿಕೆ ನೀಡಿದ್ದಾರೆ.