ಹೈಕೋರ್ಟ್ ಆವರಣದಲ್ಲಿ ವಕೀಲೆಯ ಭೀಕರ ಹತ್ಯೆ
ವಕೀಲೆಯನ್ನು 25 ವರ್ಷದ ನವೀನಾ ಎಂದು ತಿಳಿದುಬಂದಿದೆ. ಆಕೆ ಪ್ರಕಾಶ್ ಶೆಟ್ಟಿ ಎಂಬ ವಕೀಲರ ಕೈಗೆಳಗೆ ಕೆಲಸ ಮಾಡುತ್ತಿದ್ದಳು. ಹತ್ಯೆಗೈದಿರುವ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಮತ್ತು ನ್ಯಾಯಾಧೀಶರು ಆಗಮಿಸಿದ್ದಾರೆ.
ಕೆಲ ಪ್ರತ್ಯಕ್ಷದರ್ಶಿಗಳ ಪ್ರಕಾರ, ವಕೀಲರ ದಿರಿಸಿನಲ್ಲಿದ್ದ ವ್ಯಕ್ತಿಯೊಬ್ಬ ಮೊದಲನೇ ಮಹಡಿಯಲ್ಲಿರುವ ಕೋರ್ಟ್ ಹಾಲ್ 3ರ ಮುಂದೆ ಠಳಾಯಿಸುತ್ತಿದ್ದ. 1.45ರ ಸುಮಾರಿಗೆ ವಕೀಲೆಯ ಎದೆಗೆ ಚೂರಿ ಚುಚ್ಚಿದ್ದಾನೆ. ಪ್ರಥಮಬಾರಿಗೆ ಹೈಕೋರ್ಟಿನಲ್ಲಿ ಇಂಥ ಘಟನೆ ಸಂಭವಿಸಿರುವುದರಿಂದ ಜನ ಉದ್ವಿಗ್ನಗೊಂಡಿದ್ದಾರೆ.
ಪ್ರೇಮ ವೈಫಲ್ಯ? : ಹತ್ಯೆ ಮಾಡಿದವನನ್ನು ರಾಜಪ್ಪ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಪ್ಪ ಮತ್ತು ನವೀನಾ ಬಹುದಿನಗಳಿಂದ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚಿಗೆ ಆಕೆಯ ನಿಶ್ಚಿತಾರ್ಥ ಆಗಿದ್ದರಿಂದ ರಾಜಪ್ಪ ಈ ಕೃತ್ಯವೆಸಗಿರಬಹುದು ಎಂದು ಹೇಳಲಾಗುತ್ತಿದೆ. ನವೀನಾಗೆ ಚೂರಿ ಚುಚ್ಚಿದ ರಾಜಪ್ಪ ಕೂಡಲೆ ಶೌಚಾಲಯಕ್ಕೆ ಹೋಗಿ ವಿಷ ಸೇವಿಸಿ, ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಚ್ಚ ನ್ಯಾಯಾಲಯಕ್ಕೆ ಬಿಗಿಭದ್ರತೆ ಒದಗಿಸಲಾಗಿದೆಯಾದರೂ ವ್ಯಕ್ತಿ ಮಾರಕಾಸ್ತ್ರಗಳನ್ನು ಹೇಗೆ ತಂದ ಎಂಬುದೇ ಪ್ರಶ್ನೆಯಾಗಿದೆ. ಪೊಲೀಸರ ಬಿಗಿ ಭದ್ರತೆಯಿದ್ದರೂ ನ್ಯಾಯಾಲಯ ಕಬ್ಬನ್ ಪಾರ್ಕಿನ ಬದಿಯಿಂದ ಸಂಪೂರ್ಣ ತೆರೆದುಕೊಂಡಿದೆ.