ನಿವೇದಿತಾಳ ನಿರ್ಧಾರವನ್ನು ಗೌರವಿಸುತ್ತೇವೆ : ಮುರುಘ ಶ್ರೀ
ಕೆನಡಾ ಪ್ರವಾಸದಿಂದ ಇಂದು ಬೆಂಗಳೂರಿಗೆ ಆಗಮಿಸಿದ ಶ್ರೀಗಳು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ನಿವೇದಿತಾ ಅವರು ಕಳೆದ 10 ವರ್ಷಗಳ ಹಿಂದೆ ಶ್ರೀಮಠದಲ್ಲಿ ಸನ್ಯಾಸತ್ವ ದೀಕ್ಷೆ ಪಡೆದುಕೊಂಡಿದ್ದರು. ಸಿರಸಿಯಲ್ಲಿರುವ ಮಠದ ಶಾಖಾ ಮಠವಾದ ಶ್ರೀ ರುದ್ರದೇವರ ಮಠದ ಉಸ್ತುವಾರಿಗಾಗಿ ಅವರನ್ನು ನೇಮಿಸಲಾಗಿತ್ತು. ಆದರೆ, ಅವರನ್ನು ಆ ಮಠದ ಪೀಠಾಧ್ಯಕ್ಷೆಯನ್ನಾಗಿ ನೇಮಿಸಿರಲಿಲ್ಲ ಎಂದು ಶ್ರೀಗಳು ಹೇಳಿದರು.
ನಿವೇದಿತಾ ಅವರು ಮದುವೆಯಾಗುವ ಸಂಗತಿ ಮೊದಲೇ ನಮಗೆ ತಿಳಿಸಿದ್ದರು. ಸನ್ಯಾಸತ್ವದಿಂದ ನನಗೆ ಬಿಡುಗಡೆ ನೀಡಿ ಎಂದು ಅವರು ಕೋರಿಕೊಂಡಿದ್ದರು. ಇದಕ್ಕೆ ನಾವು ಕೂಡಾ ಸಮ್ಮತಿಸಿದ್ದೇವು. ಸನ್ಯಾಸತ್ವ ತ್ಯಜಿಸಿ ಮದುವೆಯಾಗುವುದು ಅವರ ವೈಯಕ್ತಿಕ ವಿಚಾರ. ಶ್ರೀಮಠದಲ್ಲಿ ಎಲ್ಲರಿಗೂ ಅಭಿವೃಕ್ತಿ ಸ್ವಾತಂತ್ರ್ಯವನ್ನು ನೀಡಿದ್ದೇವೆ. ನಿವೇದಿತಾ ತನ್ನ ಸಮಸ್ಯೆಯನ್ನು ಹೇಳಿಕೊಂಡಾಗ ನಾವುಗಳು ಅದನ್ನು ಸ್ವಾಗತಿಸಿದ್ದೆವು.
ಮದುವೆಯಾಗಿರುವ ನೂತನ ದಂಪತಿಗಳಿಗೆ ಶುಭವಾಗಲಿ. ಆದರೆ, ಶ್ರೀಮಠವನ್ನು ಯಾವ ಕಾರಣಕ್ಕೂ ದೂಷಿಸಬಾರದು. ಅವರು ತಮ್ಮ ಜೀವನ ಕಂಡುಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ನಿವೇದಿತಾ ಅವರಿಗೆ ಸನ್ಯಾಸತ್ವ ಬೇಸರವಾಗಿದ್ದರಿಂದ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಇದರಲ್ಲಿ ಯಾವ ತಪ್ಪೂ ಇಲ್ಲ ಎಂದು ಶ್ರೀಗಳು ಅಭಿಪ್ರಾಯಪಟ್ಟರು.