ಅವಿರತದಿಂದ ಗ್ರಾಮೀಣ ಮಕ್ಕಳಿಗೆ ಪುಸ್ತಕ ವಿತರಣೆ
ಈ ಕಾರ್ಯದಲ್ಲಿ ಮತ್ತೊಂದು ಸ್ವಯಂ ಸೇವಾ ಸಂಸ್ಥೆಯಾದ 'ಇಂಡಿಯಾ ಸುಧಾರ್' ಕೈ ಜೋಡಿಸಿತ್ತು. 'ಇಂಡಿಯಾ ಸುಧಾರ್'ಸಂಸ್ಥೆಯು ದೇಶದ ಹತ್ತು ಹಲವು ರಾಜ್ಯಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು ಶಿಕ್ಷಕರ ತರಬೇತಿ ಮತ್ತು ಶಿಕ್ಷಣದ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಕ್ರಿಯವಾಗಿದೆ.
ಗೌರಿಬಿದನೂರು ತಾಲೂಕು ಸೇರಿದಂತೆ ಕೋಲಾರ, ಚಿತ್ರದುರ್ಗ, ತುಮಕೂರು, ಜಿಲ್ಲೆಗಳಲ್ಲಿನ ಹಿಂದುಳಿದ ಪ್ರದೇಶದಲ್ಲಿರುವ ಸುಮಾರು 60 ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು ಏಳು ಸಾವಿರ ವಿದ್ಯಾರ್ಥಿಗಳಿಗೆ ಸುಮಾರು 50,000 ಬರೆಯುವ ಪುಸ್ತಕ ಮತ್ತು ಸಾಮಗ್ರಿಗಳನ್ನು ಒದಗಿಸಲಾಯಿತು.
ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗು ಹಲವಾರು ಸಂಸ್ಥೆಗಳು ದೇಣಿಗೆ ನೀಡಿದ್ದು, ಅವುಗಳಲ್ಲಿ ಸ್ಯಾಮ್ ಸಂಗ್, ಇಮ್ಯಾಜಿನ್ ಇಂಡಿಯಾ ಮತ್ತು ಸಿನಾಪ್ಸಿಸ್ ಅವರುಗಳ ಕೊಡುಗೆ ಪ್ರಮುಖವಾಗಿದೆ. ಜೊತೆಗೆ ಮಾಧ್ಯಮ ಪ್ರತಿನಿಧಿಯಾಗಿ ರೆಡ್ ಎಫ್.ಎಮ್ ರೇಡಿಯೋ ವಾಹಿನಿಯು ಕೈ ಜೋಡಿಸಿತ್ತು.
ಅವಿರತ ಟ್ರಸ್ಟ್ ಮುಂದಿನವಾರ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಕೆಲವು ಹಳ್ಳಿಗಳಿಗೆ ಸುಮಾರು ಐದು ಸಾವಿರ ಪುಸ್ತಕಗಳನ್ನು ವಿತರಿಸಲಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರು ಮೂಲದ ಅವಿರತ ಪ್ರತಿಷ್ಠಾನವು ಸುಮಾರು ಮೂರುವರೆ ವರ್ಷಗಳಿಂದ ಶಿಕ್ಷಣ, ಆರೋಗ್ಯ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ.