ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ : ಲೋಕಾಯುಕ್ತ
ಕನ್ನಡ ವಾಹಿನಿಯೊಂದಕ್ಕೆ ಸಂದರ್ಶನದಲ್ಲಿ ಮಾತನಾಡಿದ ಅವರು, ಆ ಸಂದರ್ಭ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ವಿಪರೀತ ಒತ್ತಡವೂ ಇತ್ತು. ಅಲ್ಲದೇ ಈ ಸಂದರ್ಭದಲ್ಲಿ ರಾಜೀನಾಮೆ ವಾಪಸ್ ಪಡೆಯಲು ಅಡ್ವಾಣಿ ಅವರ ನಾಲ್ಕು ಸಾಲಿನ ಪತ್ರ ನನ್ನ ಮನಪರಿರ್ತನೆಗೆ ಕಾರಣ. ಹಾಗಂತ ರಾಜ್ಯದ ಜನತೆ ಮೇಲೆ ಗೌರವವಿಲ್ಲ, ನನ್ನನ್ನು ಬೆಂಬಲಿಸಿದ ಹೋರಾಟಗಾರರು, ಸಂಘಸಂಸ್ಥೆಗಳ ಮೇಲೆ ಗೌರವವಿಲ್ಲ ಅಂತ ಅರ್ಥ ಅಲ್ಲ.
ನಾನು ಕರ್ನಾಟಕದ ಲೋಕಾಯುಕ್ತ ಎನ್ನುವುದು ನನಗೆ ನನೆಪಿದೆ. ಒಟ್ಟಿನಲ್ಲಿ ನನ್ನಿಂದ ಆ ಸಮಯದಲ್ಲಿ ತಪ್ಪಾಗಿದ್ದರೆ ಕ್ಷಮಿಸಿ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಮನವಿ ಮಾಡಿಕೊಂಡರು. ಇದರಿಂದ ರಾಜ್ಯದ ವಿವಿಧ ಬಾಗಗಳಿಂದ ಹೆಗ್ಡೆ ಅವರ ವಿರುದ್ಧ ಎದ್ದಿದ್ದ ಅಸಮಾಧಾನವನ್ನು ತಣ್ಣಗೆ ಮಾಡುವಲ್ಲಿ ಸಫಲರಾಗಿದ್ದಾರೆ.
ಪ್ರಜಾಪ್ರಭುತ್ವಕ್ಕೆ ಅವಮಾನ : ಜನರ ಆಶಯಕ್ಕೆ ಮಣಿಯದೆ ರಾಜಕೀಯ ನಾಯಕರೊಬ್ಬರ ಸೂಚನೆ ಮೂಲಕ ರಾಜೀನಾಮೆ ವಾಪಸ್ ಪಡೆಯುವ ಮೂಲಕ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಅವಮಾನ ಮಾಡಿದ್ದಾರೆ ಎಂದು ಮೈಸೂರು ಸಂಸದ ಎಚ್ ವಿಶ್ವನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರಾಜೀನಾಮೆ ವಾಪಸ್ ಪಡೆಯುವ ಹಿಂದೆ ಆರ್ಎಸ್ಎಸ್ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ. ಏನೇ ಆದರೂ ಹೆಗ್ಡೆ ರಾಜೀನಾಮೆ ವಾಪಸ್ ಪಡೆದಿದ್ದು ಸಂತಸ ಸಂಗತಿ ಎಂದು ವಿಶ್ವನಾಥ ಹೇಳಿದರು.