ಸವಣೂರು ನವಾಬರ ಬಂಗಲೆ ನವೀಕರಣ
ನವಾಬರ ಕಾಲದ ಸ್ಮಾರಕಗಳನ್ನು ಸಂರಕ್ಷಿಸಿಕೊಳ್ಳಬೇಕು ಎಂಬ ಜನರ ಬಹುದಿನಗಳ ಬೇಡಿಕೆಗೆ ಮೊದಲ ಬಾರಿ ಸ್ಪಂದನೆ ದೊರೆತಿದ್ದು, ತಾಲೂಕ್ ಪಂಚಾಯ್ತಿಯ ಸದಸ್ಯರು ಹಾಗೂ ಅಧಿಕಾರಿಗಳ ವಿಶೇಷ ಆಸಕ್ತಿಯ ಫಲವಾಗಿ, ನವಾಬರ ಬಂಗಲೆ ಜೀವಂತಿಕೆಯನ್ನು ಪಡೆದುಕೊಳ್ಳುತ್ತಿದೆ.
ಐತಿಹಾಸಿಕ ಹಿನ್ನಲೆ ಹಾಗೂ ಕಲಾತ್ಮಕತೆಯನ್ನು ಹೊಂದಿರುವ ಹಲವಾರು ಕಟ್ಟಡಗಳು- ಕೋಟೆ ಬಾಗಿಲುಗಳು ಸವಣೂರಿನಲ್ಲಿದ್ದು, ಅವಸಾನದ ಅಂಚಿಗೆ ಸಾಗುತ್ತಿದೆ. ಇವುಗಳಲ್ಲಿ ಅತ್ಯಂತ ಪ್ರಮುಖವಾದ ನವಾಬರ ಬಂಗಲೆಯ ಸಂರಕ್ಷಣಾ ಕಾರ್ಯಕ್ಕೆ ತಾಲೂಕಾ ಪಂಚಾಯ್ತಿ ಮುಂದಾಗಿದ್ದು, ನೆಲಸಮಗೊಳ್ಳುವ ಹಂತದಲ್ಲಿದ್ದ ಕಟ್ಟಡಕ್ಕೆ ಪುನಶ್ಚೇತನ ನೀಡಿದೆ.
ಈ ಬಂಗಲೆಯ ನೆಲ ಮಹಡಿಯಲ್ಲಿ ತಾ.ಪಂ ಕಾರ್ಯಾಲಯ ಕಾರ್ಯನಿರ್ವಹಿಸುತ್ತಿದೆ. ಕಟ್ಟಡದ ಮೇಲ್ಭಾಗದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸರಕಾರಿ ಡಿಗ್ರಿ ಕಾಲೇಜು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಕಟ್ಟಡವನ್ನು ಬಳಸಿಕೊಂಡರೆ ವಿನಃ ಅದರ ಸಮರ್ಪಕವಾದ ನಿರ್ವಹಣೆ ಕೈಗೊಳ್ಳಲಿಲ್ಲ ಎಂಬ ಅಸಮಾಧಾನವೂ ಸಾರ್ವಜನಿಕ ವಲಯದಲ್ಲಿದೆ.
ಕನಿಷ್ಠ ಪ್ರಮಾಣದ ನಿರ್ವಹಣೆಯೂ ಇಲ್ಲದೆ ನವಾಬರ ಬಂಗಲೆಯ ಮೊದಲನೆ ಮಹಡಿ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿತ್ತು. ನಿಧಾನವಾಗಿ ಅವಸಾನದ ಕಡೆಗೆ ಮುಖ ಮಾಡಿತು. ಅತ್ಯಂತ ವಿಶಾಲವಾದ ನವಾಬರ ಬಂಗಲೆಯ ಮೊದಲನೆ ಮಹಡಿ ಇತ್ತಿಚಿನ ವರ್ಷಗಳಲ್ಲಿ ಯಾವುದೇ ಕಾರ್ಯಕ್ಕೆ ಬಳಕೆ ಇಲ್ಲದೆ ಹಾಳುಕೊಂಪೆಯ ಸ್ವರೂಪ ಪಡೆದುಕೊಂಡಿತ್ತು.
ಹತ್ತಾರು ಬಗೆಯ ಪ್ರಾಣಿ ಪಕ್ಷಿಗಳಿಗೆ ಆವಾಸ ಸ್ಥಾನವಾಗಿದ್ದ ಮೊದಲನೆ ಮಹಡಿಯ ತುಂಬ ದುರ್ವಾಸನೆ ತುಂಬಿಕೊಂಡಿತ್ತು. ಶಿಥಿಲಾವಸ್ಥೆಯನ್ನು ತಲುಪಿದ ಕಟ್ಟಡ ಬಂದು ಭಾಗ ಕುಸಿತವನ್ನೂ ಕಂಡಿತ್ತು.
ಅಂತಿಮ ಹಂತದಲ್ಲಿ ಎಚ್ಚೆತ್ತುಕೊಂಡ ತಾಲೂಕ ಪಂಚಾಯ್ತಿಯ ಆಡಳಿತ ವರ್ಗ, 12 ನೇ ಹಣಕಾಸು ಯೋಜನೆಯ ಅಡಿ ಅಂದಾಜು 20 ಲಕ್ಷ ರುಗಳ ಆರಂಭಿಕ ವೆಚ್ಚದಲ್ಲಿ ನವಾಬರ ಬಂಗಲೆಯ ಮೊದಲ ಮಹಡಿಯ ಜೀರ್ಣೊದ್ಧಾರಕ್ಕೆ ಮುಂದಾಯಿತು. ಅತ್ಯಲ್ಪ ದಿನಗಳಲ್ಲಿಯೇ ಕಟ್ಟಡದ ಒಳಗಿನ ಸ್ವರೂಪವನ್ನೆ ಬದಲಾಯಿಸಲಾಗಿದ್ದು, ಕಟ್ಟಡ ತನ್ನ ಮೊದಲಿನ ಭವ್ಯತೆಯನ್ನು ಮರಳಿ ಪಡೆದುಕೊಂಡಿದೆ.
ಕುಸಿದಿರುವ ಕಟ್ಟಡದ ಹಿಂಭಾಗವನ್ನೂ ಪುನಃ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಇನ್ನೂ 20 ಲಕ್ಷ ರೂಗಳ ವೆಚ್ಚವಾಗಲಿದೆ. ವಿದ್ಯುತ್ ಸಂಪರ್ಕ ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.