ರೆಡ್ಡಿಗಳ ಶಾಸಕ ಸ್ಥಾನಕ್ಕೆ ಸಂಚಕಾರ?
ಬಳ್ಳಾರಿಯಲ್ಲಿ ಗಣಿಗಾರಿಕೆ ನಡೆಸುತ್ತಿರುವ ರೆಡ್ಡಿ ಸಹೋದರರು ರಾಜ್ಯ ಸರಕಾರದಲ್ಲಿ ಸಚಿವರೂ ಆಗಿದ್ದು, ಪ್ರಭಾವಿಗಳಾಗಿದ್ದಾರೆ. ಹೀಗಾಗಿ ಅಧಿಕಾರವನ್ನು ತಮ್ಮ ವ್ಯವಹಾರದಲ್ಲಿ ದುರ್ಬಳಿಕೆ ಮಾಡಿಕೊಂಡಿದ್ದಾರೆ ಎನ್ನುವ ಅಂಶ ಸ್ಪಷ್ಟವಾಗಿದೆ. ಕೇಂದ್ರ ಚುನಾವಣಾ ಆಯೋಗವು ರೆಡ್ಡಿ ಸಹೋದರರಿಗೆ ನೋಟಿಸ್ ನೀಡಿದ್ದು, ಶಾಸಕ ಸ್ಥಾನವನ್ನು ಏಕೆ ರದ್ದುಪಡಿಸಬಾರದು ಎನ್ನುವ ಅಂಶ ನೋಟಿಸ್ ನಲ್ಲಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ. ಇದರಿಂದ ಗಣಿಧಣಿಗಳು ಮತ್ತೊಂದು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ.
ನೋಟಿಸ್ ಗೆ ಪ್ರತಿಕ್ರಿಯೆ ನೀಡಿರುವ ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ, ಇದೊಂದು ಪತ್ರವಷ್ಟೇ. ಒಂದು ರೀತಿಯ ಶೋಕಾಸ್ ನೋಟಿಸ್ ಇದ್ದಹಾಗೆ ಎಂದು ತಣ್ಣಗೆ ಹೇಳಿದ್ದಾರೆ. ಇದು ನೋಟಿಸ್ ಅಲ್ಲ, ಪತ್ರ. ಕೆಲವು ಶಾಸಕರು ನಮ್ಮ ವಿರುದ್ಧ ನೀಡಿರುವ ದೂರಿನ ಹಿನ್ನೆಲೆಯಲ್ಲಿ ರಾಜ್ಯಪಾಲರು ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ಕಳುಹಿಸಿದ್ದರು. ಇದರ ಬಗ್ಗೆ ಪತ್ರ ಬಂದಿದೆಯೇ ಹೊರತು ಬೇರೆನೂ ಇಲ್ಲ ರೆಡ್ಡಿ ವಿವರಿಸಿದ್ದಾರೆ. ರೆಡ್ಡಿಗಳ ಅಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಕೆ ಸಿ ಕೊಂಡಯ್ಯ ರಾಜ್ಯಪಾಲರಿಗೆ ದೂರು ನೀಡಿದ್ದರು.