ಜು.5ರ ಭಾರತ್ ಬಂದ್ ಗೆ ವ್ಯಾಪಕ ಬೆಂಬಲ
ಆಲ್ ಇಂಡಿಯಾ ಮೋಟಾರ್ ಟ್ರಾನ್ ಸ್ಫೋರ್ಟ್ ಕಾಂಗ್ರೆಸ್ ಬಂದ್ ಗೆ ಬೆಂಬಲ ಸೂಚಿಸಿದೆ. ಬೆಂಬಲ ಸೂಚಕವಾಗಿ ಎಲ್ಲಾ ವಾಹನಗಳ ಮಾಲೀಕರು ಮತ್ತು ಚಾಲಕರು ಸಾಗಣೆ ವಾಹನ ಸ್ಥಗಿತಗೊಳಿಸಲಿದ್ದಾರೆ ಮತ್ತು ಅಂದು ದೇಶಾದ್ಯಂತ ಸರಕು ಸಾಗಣೆ ವಾಹನಗಳು ರಸ್ತೆಗಿಳಿಯುವುದಿಲ್ಲ ಎಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆ ಅಂದು ನಡೆಯ ಬೇಕಿದ್ದ ದ್ವಿತೀಯ ಪಿಯುಸಿ ಸಪ್ಲಿಮೆಂಟರಿ ರಾಜ್ಯಶಾಸ್ತ್ರ ಮತ್ತು ಜೀವಶಾಸ್ತ್ರ ಪರೀಕ್ಷೆಯನ್ನು ಜುಲೈ 10 ಶನಿವಾರಕ್ಕೆ ಮುಂದೂಡಿದೆ.
ಬಂದ್ ಗೆ ಎಐಡಿಎಂಕೆ, ಪಿಎಂಕೆ, ತೆಲುಗುದೇಶಂ,ಪ್ರಜಾರಾಜ್ಯಂ ಸಂಪೂರ್ಣ ಬೆಂಬಲ ಸೂಚಿಸಿದರೆ, ರಾಷ್ಟ್ರೀಯ ಜನತಾದಳ, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ತಮ್ಮ ನಿಲುವನ್ನು ಇನ್ನೂ ಸ್ಪಷ್ಟ ಪಡಿಸಲಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಆಟೋ ಚಾಲಕರ ಸಂಘ ತಮ್ಮ ನಿರ್ಧಾರವನ್ನು ಇನ್ನೂ ಪ್ರಕಟಿಸಬೇಕಾಗಿದೆ.
ಜುಲೈ ಐದರಂದು ಜೆಡಿಎಸ್ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಎಲ್ಲಾ ಪದಾರ್ಥಗಳ ಬೆಲೆ ಹಿಂದೆಂದೂ ಕಾಣದಷ್ಟು ಏರಿಕೆಯಾಗಿದ್ದು ಜನಸಾಮಾನ್ಯರ ಮೇಲೆಬರೆ ಎಳೆದಂತಾಗಿದೆ. ಯುಪಿಎ ಸರಕಾರದ ತೈಲ ಬೆಲೆ ಏರಿಕೆ, ರಾಜ್ಯ ಬಿಜೆಪಿ ಸರಕಾರದ ಭ್ರಷ್ಟಾಚಾರ, ಲೋಕಾಯುಕ್ತರ ಮರು ನೇಮಕಕ್ಕೆ ಒತ್ತಾಯಿಸಿ ಎಡಪಕ್ಷಗಳೊಂದಿಗೆ ಸೇರಿ ಭಾರೀ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಒತ್ತಡ ತರಲಾಗುವುದು ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿಕೆ ನೀಡಿದ್ದಾರೆ.