ಅಗ್ನಿ ಶ್ರೀಧರ್ ವಿರುದ್ಧ ಶ್ರೀಶ್ರೀ ರವಿಶಂಕರ್ ದೂರು
ನಿಮ್ಮ ಹಾಗೂ ಆರ್ಟ್ ಆಫ್ ಲಿವಿಂಗ್ ಕೇಂದ್ರಕ್ಕೆ ಅಪಮಾನ ಮಾಡುವಂತಹ ಸಿಡಿಗಳು ನಮ್ಮ ಬಳಿ ಇವೆ. ಕೇಳಿದಷ್ಟು ಹಣ ನೀಡದಿದ್ದರೆ ಅದನ್ನು ಬಹಿರಂಗಗೊಳಿಸುವುದಾಗಿ ನಮಗೆ ಅಗ್ನಿ ಪತ್ರಿಕೆ ಸಂಪಾದಕ ಶ್ರೀಧರ್ ಕರೆ ಮಾಡಿ ಬೆದರಿಕೆ ಒಡ್ಡಿದ್ದಾರೆ ಎಂದು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಶ್ರೀಶ್ರೀ ರವಿಶಂಕರ್ ಗುರೂಜಿ ದೂರು ದಾಖಲಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಗ್ನಿ ಶ್ರೀಧರ್, ಗುರೂಜಿ ಅವರಿಗೆ ಕರೆ ಮಾಡಿ ಬೆದರಿಕೆ ಒಡ್ಡುವಂತಹ ಕೆಳಮಟ್ಟದ ವ್ಯಕ್ತಿ ನಾನಲ್ಲ. ಸುಮಾರು 12 ವರ್ಷಗಳ ಕಾಲ ಪತ್ರಿಕೆಯೊಂದರ ಸಂಪಾದಕನಾಗಿ ಕೆಲಸ ಮಾಡುತ್ತಿರುವೆ. ಇಂತಹ ಕರೆ ಮಾಡುವ ಅವಶ್ಯಕತೆಯಾಗಲಿ, ಅಗತ್ಯತೆಯಾಗಲಿ ನನಗಿಲ್ಲ. ಶ್ರೀಗಳು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗುರೂಜಿ ಮಾಡಿರುವ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಶ್ರೀಧರ್, ಶ್ರೀಗಳನ್ನು ನಾನೇ ಖುದ್ದು ಭೇಟಿ ಮಾಡಿ ಚರ್ಚಿಸುವುದಾಗಿ ಹೇಳಿದ್ದಾರೆ. 15 ಎಕರೆ ಜಮೀನನ್ನು ಆರ್ಟ್ ಆಫ್ ಲೀವಿಂಗ್ ಅಕ್ರಮವಾಗಿ ವಶಪಡಿಸಿಕೊಂಡಿದೆ. ಈ ಬಗ್ಗೆ ಅನೇಕ ಸಲ ನಾನು ಪ್ರತಿಭಟಿಸಿರುವೆ. ಆದರೆ, ಕರೆ ಮಾಡಿ ಬೆದರಿಕೆ ಒಡ್ಡುವಂತ ಕೀಳಮಟ್ಟಕ್ಕೆ ಇಳಿಯುವವನಲ್ಲ ಎಂದಿದ್ದಾರೆ. ಆಸ್ತಿ ಕಬಳಿಕೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕು ಎಂದು ಶ್ರೀಧರ್ ಒತ್ತಾಯಿಸಿದ್ದಾರೆ.
ಕೇಳಿದಷ್ಟು ಹಣ ನೀಡದಿದ್ದರೆ ನಿಮ್ಮ ಹಾಗೂ ಆರ್ಟ್ ಆಫ್ ಲಿವಿಂಗ್ ನ ಮಾನ ಕಳೆಯುತ್ತೇನೆ. ಅದಕ್ಕೆ ಬೇಕಿರುವ ಎಲ್ಲ ಸಿಡಿಗಳು ನಮ್ಮ ಬಳಿ ಇವೆ. ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ಆಶ್ರಮಕ್ಕೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಇದರಲ್ಲಿ ಯಾವುದೇ ಮಹತ್ವವಿಲ್ಲ ಎಂದು ಆಶ್ರಮವಾಸಿಗಳು ಭಾವಿಸಿದ್ದರು. ಈಗ ಮತ್ತೆ ಹಣಕ್ಕಾಗಿ ಬೆದರಿಕೆ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಹಣ ನೀಡದಿದ್ದರೆ ಮಾಧ್ಯಮಕ್ಕೆ ಈ ಸಿಡಿಗಳನ್ನು ಬಿಡುಗಡೆ ಮಾಡುತ್ತೇವೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀವು ಮತ್ತು ಆರ್ಟ್ ಆಫ್ ಲಿವಿಂಗ್ ನ ಮಾನವನ್ನು ಕಳೆಯುವುದಾಗಿ ಬೆದರಿಕೆ ಮಾಡಿದ್ದರು ಎಂದು ಗುರೂಜಿ ಮಂಗಳವಾರ ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದರು.