ಕೃಷ್ಣಗೆ ಹಿಂದೂ ಯಾತ್ರಿಕರ ಸಂಕಷ್ಟ ವಿವರಿಸಿದ ಶೋಭಾ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹಜ್ ಯಾತ್ರೆ ಕೈಗೊಳ್ಳುವ ಮುಸಲ್ಮಾನರಿಗೆ ರಿಯಾಯತಿ ದರದ ವಿಮಾನ ಟಿಕೆಟ್ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯ ನೀಡಲಾಗುತ್ತದೆ. ಅದೇ ರೀತಿ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಹಿಂದೂಗಳಿಗೂ ವಿವಿಧ ರಿಯಾಯಿತಿ ಕಲ್ಪಿಸಬೇಕು.
ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾಗಿರುವ ಮಾನಸ ಸರೋವರ ಈಗ ಚೀನಾ ವ್ಯಾಪ್ತಿಯಲ್ಲಿದೆ. ನೇಪಾಳಕ್ಕೆ ತೆರಳಿ ಅಲ್ಲಿಂದ ಮಾನಸ ಸರೋವರ ಯಾತ್ರೆ ಕೈಗೊಳ್ಳಬೇಕಾಗುತ್ತದೆ. ಇದಕ್ಕೋಸ್ಕರ ಚೀನಾಕ್ಕೆ ವೀಸಾ ಶುಲ್ಕವನ್ನು ಪಾವತಿಸುವುದು ಹಾಗೂ ನೇಪಾಳ ಮೂಲಕ ಯಾತ್ರೆ ಕೈಗೊಳ್ಳುವುದು ತುಂಬ ವೆಚ್ಚದಾಯಕ. ಪರಿಣಾಮವಾಗಿ ಮಧ್ಯಮ ಹಾಗೂ ಬಡ ಕುಟುಂಬದ ಸದಸ್ಯರು ಈ ಯಾತ್ರೆ ಕೈಗೊಳ್ಳುವುದು ಕಷ್ಟದ ಕಾರ್ಯವಾಗಿದೆ. ಹಾಗಾಗಿ, ಮಾನಸ ಸರೋವರ ಯಾತ್ರೆ ಕೈಗೊಳ್ಳುವವರಿಗೆ ರಾಜ್ಯ ಸರ್ಕಾರ 25 ಸಾವಿರ ರು. ಸಹಾಯಧನ ನೀಡಬೇಕು.
ಕೈಲಾಸದಲ್ಲಿ ಮೂಲಸೌಕರ್ಯವೇ ಇಲ್ಲ: ಮಾನಸ ಸರೋವರದಲ್ಲಿ ಕುಡಿಯುವ ನೀರು, ಶೌಚಾಲಯ, ಸ್ನಾನಗೃಹ, ವಸತಿ ಸೌಲಭ್ಯ, ವೈದ್ಯಕೀಯ ಸೇವೆ ಸೇರಿದಂತೆ ಯಾವುದೇ ರೀತಿಯ ಮೂಲಸೌಕರ್ಯ ವ್ಯವಸ್ಥೆ ಇಲ್ಲ.
ಸಮುದ್ರ ಮಟ್ಟದಿಂದ 16 ಸಾವಿರ ಮೀಟರ್ನಷ್ಟು ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಯಾತ್ರಾರ್ಥಿಗಳ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾದರೆ ವೈದ್ಯಕೀಯ ನೆರವು ಸಿಗುವುದಿಲ್ಲ. ಅಲ್ಲಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುವ ವಿಮಾನಗಳು ತೀರ ದುಃಸ್ಥಿತಿಯಲ್ಲಿರುತ್ತವೆ. ರನ್ ವೇಗಳಂತೂ ಇಲ್ಲವೇ ಇಲ್ಲ. ಹಾಗಾಗಿ, ಯಾತ್ರೆ ಅಪಾಯಕಾರಿ ಎನಿಸಿದೆ ಎಂದು ಶಾಸಕಿ ಶೋಭಾ ಕರಂದ್ಲಾಜೆ ತಿಳಿಸಿದರು.
ಎಸ್ಸೆಂ ಜತೆ ಸಿಎಂ ಭೇಟಿ:ವಿದೇಶಾಂಗ ಸಚಿವ ಎಸ್ಎಮ್ ಕೃಷ್ಣ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸಹ ಭೇಟಿ ಮಾಡಿ, ನವೆಂಬರ್ ನಲ್ಲಿ ಭಾರತಕ್ಕೆ ಬರಲಿರುವ ಅಮೆರಿಕ ಅಧ್ಯಕ್ಷ ಅವರನ್ನು ಬೆಂಗಳೂರಿಗೂ ಕರೆ ತರುವಂತೆ ಆಹ್ವಾನ ಪೂರ್ವಕ ಮನವಿಪತ್ರವನ್ನು ಕೃಷ್ಣ ಅವರಿಗೆ ನೀಡಿದರು.