ಪೆಟ್ರೋಲ್ ಬಂಕಲ್ಲಿ 'ನೋ ಸ್ಟಾಕ್' ಬೋರ್ಡ್ ಸ್ವಾಗತ
ಪೆಟ್ರೋಲ್ ಬೆಲೆ ಲೀಟರಿಗೆ 3.50 ರು. ಏರುತ್ತಿದ್ದಂತೆ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಚಾಲಕರು ಪೆಟ್ರೋಲ್ ತುಂಬಿಸಿಕೊಳ್ಳಲು ಬಂಕಿಗೆ ಬಂದರೆ ನಗರದಾದ್ಯಂತ ಬಂಕ್ ಗಳಲ್ಲಿ ಅವರನ್ನು ಸ್ವಾಗತಿದ್ದು 'ನೋ ಸ್ಟಾಕ್' ಬೋರ್ಡುಗಳು. ಶುಕ್ರವಾರ ರಾತ್ರಿ 12 ಗಂಟೆಯಿಂದಲೇ ಹೊಸ ದರಗಳು ಜಾರಿಯಾಗುತ್ತಿರುವುದರಿಂದ ಸಾಧ್ಯವಾದಷ್ಟು ಪೆಟ್ರೋಲ್ ತುಂಬಿಸಿಕೊಳ್ಳಲು ಚಾಲಕರು ಮುಗಿಬೀಳುತ್ತಿದ್ದಾರೆ.
ಪೆಟ್ರೋಲ್ ಬಂಕ್ ಮಾಲಿಕರ ನಡವಳಿಕೆಯಿಂದ ಸಿಟ್ಟಿಗೆದ್ದ ಆರ್ ಅಶೋಕ್ ಖುದ್ದಾಗಿ ದಾಳಿ ನಡೆಸಿದ್ದು ಎರಡು ಪೆಟ್ರೋಲ್ ಬಂಕ್ ಗಳಿಗೆ ಬೀಗ ಜಡಿದಿದ್ದಾರೆ. ಕೇಂದ್ರ ಸರಕಾರ ಮೇಲಿಂದ ಮೇಲೆ ಪೆಟ್ರೋಲ್ ಬೆಲೆಯನ್ನು ಏರಿಸುತ್ತ ತುಘಲಕ್ ದರ್ಬಾರ್ ನಡೆಸುತ್ತಿದೆ. ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಮಧ್ಯರಾತ್ರಿಯ ಒಳಗಡೆ ಪೆಟ್ರೋಲ್ ದರ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ.
ಇಡೀ ದೇಶದಲ್ಲಿ ಬೆಂಗಳೂರಿನಲ್ಲಿನ ಜನತೆ ಪೆಟ್ರೋಲ್ ಮತ್ತು ಡೀಸೆಲ್ಲಿಗೆ ಹೆಚ್ಚಿನ ಹಣ ನೀಡುತ್ತಿದ್ದಾರೆ. ಏರಿಕೆಯಿಂದಾಗಿ ಲೀಟರಿಗೆ 54.26 ರು. ಇದ್ದ ಪೆಟ್ರೋಲ್ 57.99 ರು.(58 ರು. ಅಂದುಕೊಳ್ಳಿ) ಮತ್ತು ಲೀಟರಿಗೆ 40.15 ರು. ಇದ್ದ ಡೀಸೆಲ್ ಬೆಲೆ 42.15 ರು. ಆಗಲಿದೆ. ಎಲ್ ಪಿ ಜಿ ಬೆಲೆ 325 ರು. ಇದ್ದದ್ದು 35 ರು. ಏರಿದ್ದರಿಂದ ಸಿಲಿಂಡರಿಗೆ 360 ರು. ಆಗಲಿದೆ.
ಯಾವುದೇ ಬೆಲೆ ಏರಿದರೂ, ಕೆಲ ದಿನಗಳ ಕಾಲ ಗೊಣಗಿಕೊಂಡು ನಂತರ ವಿರೋಧ ವ್ಯಕ್ತಪಡಿಸದೆ ಒಪ್ಪಿಕೊಳ್ಳುವುದು ನಮ್ಮವರ ಜಾಯಮಾನ. ಈ ಬಾರಿ ಕೂಡ ಹಾಗೆ ಆಗಕೂಡದು. ಜನ ಬೀದಿಗಳಿದು ಪ್ರತಿಭಟಿಸಬೇಕು. ಪೆಟ್ರೋಲ್, ಎಲ್ ಪಿ ಜಿ ಬೆಲೆ ಮಾತ್ರವಲ್ಲ, ಅದರೊಟ್ಟಿಗೆ ಬಸ್, ರೈಲು, ಹಾಲು, ಹಣ್ಣು, ಸರಕು ಸಾಗಣೆ, ಆಹಾರ ಧಾನ್ಯ, ಇತರ ಅಗತ್ಯ ವಸ್ತುಗಳು ಬೆಲೆಗಳು ಏರುತ್ತವೆ ಎಂಬುದು ನಮ್ಮ ಓದುಗರೊಬ್ಬರ ಅಭಿಪ್ರಾಯ.
ಈ ಬೆಲೆ ಏರಿಕೆಯ ಝಳದಿಂದ ತಪ್ಪಿಸಿಕೊಳ್ಳಲು ಏನು ಉಪಾಯ ಕಂಡುಕೊಳ್ಳುವಿರಿ? ನಮಗೆ ಬರೆದು ತಿಳಿಸಿ. ನಿಮ್ಮ ಉಪಾಯಗಳು ಇತರರಿಗೂ ಅನುಕೂಲವಾಗಬಹುದು.