ವಂಚನೆ ಆರೋಪ ನಿರಾಕರಿಸಿದ ಲಾಡ್ ಗೆ ಜಾಮೀನು?
ಸಂತೋಷ್ ಲಾಡ್ ಅವರ ವಿರುದ್ಧ ವಂಚನೆ ಆರೋಪ ಹೊರೆಸಿ ದುಬೈ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆ ಎಮಾರ್ ಎಂಜಿಎಫ್ ಸಮೂಹ ನೀಡಿದ್ದ ದೂರನ್ನು ಆಧರಿಸಿ, ನವದೆಹಲಿ ಪೊಲೀಸರು ಭಾರತೀಯ ದಂದ ಸಂಹಿತೆ 406, 420 ಹಾಗೂ 120 (B) ಅನ್ವಯ ಕೇಸ್ ದಾಖಲಿಸಿಕೊಂಡಿದ್ದಾರೆ. ಎಮಾರ್ ಸಮೂಹದಿಂದ ಹಣ ಪಡೆದಿದ್ದ ಸಂತೋಷ್ ಲಾಡ್ , ಬೆಂಗಳೂರಿನಲ್ಲಿ ಭೂಮಿ ಖರೀದಿಸಿ, ಗೃಹ ನಿರ್ಮಾಣ ಮಾಡುವುದಾಗಿ ಹೇಳಿ, ವಂಚಿಸಿದ್ದಾರೆ ಎಂದು ಆರೋಪ ಹೊರೆಸಲಾಗಿದೆ.
ಆರೋಪ ನಿರಾಕರಿಸಿದ ಶಾಸಕ ಲಾಡ್: ರಾಜಕೀಯ ಏಳಿಗೆ ಸಹಿಸದವರ ಪಿತೂರಿ ಇದು. ಎಮಾರ್ ಹಾಗೂ ಬಾಲಜಿ ಸಮೂಹದ ನಡುವೆ ವ್ಯವಹಾರ ನಡೆದಿರುವುದು ನಿಜ. ಆದರೆ, ನಾನು ವಂಚನೆ ಮಾಡಿಲ್ಲ. ಕೆಲವು ಕೋಟಿ ರುಗಳಿಗಾಗಿ ಯಾರನ್ನಾಗಲಿ ವಂಚಿಸುವ ಸ್ಥಿತಿ ನನಗೆ ಬಂದಿಲ್ಲ. ಬೆಂಗಳೂರಿನಲ್ಲಿ ನಡೆದ ಘಟನೆಗೆ ದೆಹಲಿಯಲ್ಲಿ ದೂರು ನೀಡಿದ್ದು ಎಷ್ಟು ಸರಿ. ದೇಶದಲ್ಲಿದ್ದರೂ ಲುಕ್ ಔಟ್ ಆದೇಶ ಯಾಕೆ ನೀಡಿದ್ದಾರೆ ತಿಳಿಯಲಿಲ್ಲ ಎಂದು ಕಲಘಟಗಿ ಕಾಂಗ್ರೆಸ್ ಶಾಸಕ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಭೂಮಿ ಖರೀದಿಸಲು ಎಮಾರ್ ಸಮೂಹದಿಂದ 7 ಕೋಟಿ ರು ಪಡೆಯಲಾಗಿತ್ತು. ಬಾಲಾಜಿ ಗ್ರೂಪ್ ಎಮಾರ್ ಗೋಸ್ಕರ ಹಸಿರು ವಲಯದಲ್ಲಿ 4.5 ಕೋಟಿ ರು ವ್ಯಯಿಸಿ, ಭೂ ಖರೀದಿಸಿತ್ತು. ಆದರೆ, ಇದಕ್ಕೆ ಒಪ್ಪದ ಎಮಾರ್, ಪೂರ್ತಿ ಹಣವನ್ನು ಹಿಂತಿರುಗಿಸುವಂತೆ ಒತ್ತಾಯ ಪಡಿಸಿತ್ತು. ಇದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದೇ ಎಂದು ಸಂತೋಷ್ ಹೇಳಿದ್ದಾರೆ.
ಜಾಮೀನು ನೀಡಿದ ಪಟಿಯಾಲ ಕೋರ್ಟ್:ಪಟಿಯಾಲದಲ್ಲಿರುವ ಆರ್ಥಿಕ ಅಪರಾಧ ದಳ ಕೋರ್ಟ್ ,ಪ್ರಕರಣದ ವಿಚಾರಣೆ ಇಂದು ನಡೆಸಿತು. ಸಂತೋಷ್ ಲಾಡ್ಗೆ 2 ಲಕ್ಷ ರುಪಾಯಿ ಭದ್ರತಾ ಠೇವಣಿ ಇಡಲು ಸೂಚಿಸಿ, ಜುಲೈ 14 ರವರೆಗೆ ಮಧ್ಯಂತರ ಜಾಮೀನು ನೀಡಿದೆ.