ಹೊಗೇನಕಲ್ ವಿರುದ್ಧ ಚಾಮರಾಜನಗರ ಬಂದ್ ಯಶಸ್ವಿ
ಜಿಲ್ಲಾಕೇಂದ್ರದಲ್ಲಿ ಖಾಸಗಿ ಮತ್ತು ಕೆಎಸ್ಆರ್ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸರ್ಕಾರಿ ಶಾಲೆ, ಕಾಲೇಜುಗಳಿಗೆ ಅಧಿಕೃತ ರಜೆ ಘೋಷಿಸಲಾಗಿತ್ತು. ಖಾಸಗಿ ಶಾಲೆಗಳು ಸಾಂದರ್ಭಿಕ ರಜೆ ಘೋಷಿಸಿದ್ದವು. ಚಿತ್ರಪ್ರದರ್ಶನ ಕೂಡ ಬಂದ್ ಆಗಿದ್ದು, ಚಾಮರಾಜನಗರದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆಗಳಲ್ಲಿ ಅಂಗಡಿ-ಮುಂಗಟ್ಟುಗಳು ಮುಚ್ಚಲಾಗಿತ್ತು. ಬಸ್ , ರಿಕ್ಷಾ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದವು . ಮುಂಜಾಗ್ರತೆಯ ಕ್ರಮವಾಗಿ ಜಿಲ್ಲೆಯ ಆಯಕಟ್ಟಿನ ಸ್ಥಳಗಳಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಂದ್ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಹೊಗೇನಕಲ್ ಜಂಟಿ ಭೂಸರ್ವೆ ನಡೆಸುವಂತೆ ಕನ್ನಡಿಗರು ದಶಕಗಳಿಂದಲೂ ಒತ್ತಾಯಿಸುತ್ತಾ ಬಂದಿದ್ದರೂ, ತಮಿಳುನಾಡು ಸರ್ಕಾರ ರಾಜ್ಯದ ಗಡಿಯಲ್ಲಿ ಕಾಮಗಾರಿ ಕೈಗೊಂಡು ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿದೆ.
ಹೊಗೇನಕಲ್ ಯೋಜನೆ ವಿವಾದ ಕುರಿತಂತೆ ಕೇಂದ್ರ ಸರ್ಕಾರ ಯಾವುದೇ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಹೇಳುವ ಮೂಲಕ ತಟಸ್ಥ ಧೋರಣೆ ತಳೆದಿರುವುದು ಖಂಡನೀಯ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಂ .ಮಂಜುನಾಥ್ ಗೌಡ ಹೇಳಿದರು.