ವಿರಾಜಪೇಟೆಯಲ್ಲಿ ಟೈಂ ಹೋಗುವುದೇ ಗೊತ್ತಾಗುವುದಿಲ್ಲ!
ಈಗ ಅನಾಥವಾಗಿ ನಿಂತಿರುವ ಈ ಸ್ಮಾರಕದತ್ತ ಯಾರು ಕೂಡ ಗಮನಹರಿಸುವಂತೆ ಕಾಣುತ್ತಿಲ್ಲ. ಇದರ ಪಕ್ಕದಲ್ಲಿಯೇ, ಶಾಸಕರು, ಸಚಿವರು, ಅಧಿಕಾರಿಗಳು ದಿನನಿತ್ಯ ಹಾದು ಹೋಗುತ್ತಾರೆ ಆದರೂ ಯಾರೊಬ್ಬರ ಗಮನಕ್ಕೆ ಬಾರದಿರುವುದು ಂಬಂಧಪಟ್ಟವರು ನಿರ್ಲಕ್ಷ್ಯ ತೋರಿಸುತ್ತದೆ.
ಇದು ಕೇಲ ಸಮಯ ಬಿಂಬಿಸುವ ಗಡಿಯಾರವಲ್ಲ. ಕೊಡಗಿನಲ್ಲಿರುವ ಕೆಲವೇ ಕೆಲವು ಸ್ಮಾರಕಗಳಲ್ಲಿ ಇದೂ ಒಂದಾಗಿದೆ. ಇದನ್ನು ದೇವಣಗೇರಿಯ ಸುಬೇದಾರ್ ರಾವ್ ಬಹುದ್ದೂರ್ ಮುಕ್ಕಾಟಿರ ಅಯ್ಯಪ್ಪರವರು ಕೊಲೋನೇಷನ್ ದರ್ಬಾರ್ನಲ್ಲಿ ನಡೆದ ಜಾರ್ಜ್ ದೊರೆಯ ಅಧಿಕಾರ ಸ್ವೀಕಾರ ಸಮಾರಂಭದ ಸವಿನೆನಪಿಗಾಗಿ 1911 ರಲ್ಲಿ ನಿರ್ಮಿಸಿದರೆಂದು ಇತಿಹಾಸ ಹೇಳುತ್ತದೆ.
ಎರಡು ಅಂತಸ್ತಿನ ಗೋಪುರದಲ್ಲಿ ಗಡಿಯಾರವನ್ನು ಅಳವಡಿಸಲಾಗಿದೆ. ಇದು ಬೇರೆಡೆಗಳಲ್ಲಿರುವ ಗಡಿಯಾರ ಕಂಬಗಳಿಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಭಿನ್ನವಾಗಿ ಗೋಚರಿಸುತ್ತದೆ. ವೀರಾಜಪೇಟೆಯಲ್ಲಿ ಏನೇ ಕಾರ್ಯಕ್ರಮ ಉತ್ಸವ, ಮೆರವಣಿಗೆ ನಡೆದರೂ ಅದು ಈ ಗಡಿಯಾರ ಕಂಬವನ್ನು ಹಾದು ಹೋಗಲೇ ಬೇಕು. ಇದು ಮೊದಲಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.
ಮಳೆಗಾಳಿಗೆ ಸಿಲುಕಿ ಕಳೆಗುಂದಿದ್ದ ಸ್ಮಾರಕಕ್ಕೆ ಹಿಂದೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿದ್ದ ಬಿ.ಆರ್. ವಿಜಯಚಂದ್ರರವರ ಕಾಲದಲ್ಲಿ ಸುಣ್ಣ ಬಣ್ಣ ಬಳಿಯಲಾಗಿತ್ತು. ಆ ನಂತರ ಫರೂಕ್ ರಹೀಂ ಅಧ್ಯಕ್ಷರಾಗಿದ್ದ ಕಾಲದಲ್ಲಿ ಹಳೆಯ ಗಡಿಯಾರ ತೆಗೆದು ನೂತನ ಟೈಟಾನ್ ಗಡಿಯಾರ ಅಳವಡಿಸಲಾಯಿತು. ಕಾಂತಿಬೆಳ್ಯಪ್ಪ ಅವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ಗಡಿಯಾರ ಕೆಟ್ಟು ಹೋಗಿತ್ತಾದರೂ ಅದನ್ನು ದುರಸ್ತಿ ಮಾಡಿಸಿದ್ದರು.
ಈಗ ಮತ್ತೆ ಕೆಟ್ಟು ಹೋಗಿ ಆರು ತಿಂಗಳಾಗಿದೆ ಇನ್ನೂ ಕೂಡ ಸಂಬಂಧಿಸಿದವರು ಇತ್ತ ಗಮನಹರಿಸಿದಂತೆ ಕಾಣುತ್ತಿಲ್ಲ. ಕೂಡಲೇ ಗಡಿಯಾರವನ್ನು ದುರಸ್ತಿ ಮಾಡಿ ಆ ಮೂಲಕ ಐತಿಹಾಸಿಕ ಸ್ಮಾರಕಕ್ಕೆ ಗೌರವ ನೀಡಲಿ ಎನ್ನುವುದು ಸಾರ್ವಜನಿಕರ ಮನವಿ.