ಹಂಪಿಗೂ ಬರಲಿದೆ ಸೌರಶಕ್ತಿ ಸೌಲಭ್ಯ : ಆಬ್ದುಲ್ಲಾ
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಏಳೇಸಂದ್ರ ಗ್ರಾಮದ 15 ಎಕರೆ ಪ್ರದೇಶದಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ 59 ಕೋಟಿ ರೂ ವೆಚ್ಚದಲ್ಲಿ ಅರುಣೋದಯ ಯೋಜನೆಯಡಿಯಲ್ಲಿ ಸ್ಥಾಪಿಸಿರುವ ದೇಶದ ಮೊಟ್ಟ ಮೊದಲ ಮೂರು ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಫೋಟೋ ವೋಲ್ಟಾಯಿಕ್ ಯೋಜನೆಯನ್ನು ಗುರುವಾರ ರಾಷ್ಟ್ರಕ್ಕೆ ಸಮರ್ಪಿಸಿ ಅವರು ಮಾತನಾಡುತ್ತಿದ್ದರು.
ಕೋಟ್ಯಾಂತರ ವರ್ಷಗಳ ಹಿಂದೆ, ಮತ-ಧರ್ಮಗಳು ಹುಟ್ಟಿಕೊಳ್ಳುವ ಮುನ್ನ, ಮಾನವ ಪ್ರಕೃತಿಯ ಕೊಡುಗೆಗಳಾದ ಪಂಚಭೂತಗಳನ್ನು (ಅಗ್ನಿ, ವಾಯು, ವರುಣ, ಭೂಮಿ ಮತ್ತು ಆಕಾಶ ) ಜಲ ಮತ್ತು ಸೂರ್ಯನನ್ನು ಪೂಜಿಸುತ್ತಿದ್ದ ಎಂಬುದು ಗಮನಾರ್ಹ. ಪ್ರಕೃತಿ ವಿಕೋಪ ಸಂಭವಿಸಿದ ಎಲ್ಲಾ ಸಂದರ್ಭಗಳಲ್ಲೂ ಮಾನವ ಸೂರ್ಯ, ವಾಯು ಮತ್ತು ಜಲವನ್ನು ಮೊರೆ ಹೋಗಿದ್ದಾನೆ.
ಇಡೀ ದೇಶದಲ್ಲಿ ಸೌರಶಕ್ತಿಯ ಬಳಕೆ ಮನೆ-ಮನೆಗೆ ವ್ಯಾಪಿಸಬೇಕಿದೆ. ಪ್ರತಿ ಮನೆಯಲ್ಲೂ ಸೌರಶಕ್ತಿಯ ನೀರು ಕಾಯಿಸುವ ಯಂತ್ರ ಹಾಗೂ ಸೌರಶಕ್ತಿ ಒಲೆಗಳ ಬಳಕೆಗಾಗಿ 2020ರ ವೇಳೆಗೆ 2000 ಮೆಗಾ ವ್ಯಾಟ್ ಸೌರಶಕ್ತಿ ಉತ್ಪಾದನೆಯಾಗಿ ರಾಷ್ಟ್ರ ಹೊಸ ಶಕೆಯತ್ತ ಸಾಗಬೇಕಿದೆ ಎಂದು ಡಾ ಅಬ್ದುಲ್ಲಾ ವಿವರಿಸಿದರು.
ಸಾಯಿಬಾಬಾ ಕ್ಷೇತ್ರ ಶಿರಡಿ, ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಕೇಂದ್ರ ಸ್ಥಾನ ಮೌಂಟ್ ಅಬು ಹಾಗೂ ಜಗದ್ವಿಖ್ಯಾತ ಶ್ರೀ ವೆಂಕಟೇಶ್ವರನ ಸನ್ನಿಧಿ ತಿರುಪತಿ ತಿರುಮಲ ದೇವಾಲಯದಲ್ಲಿ ಭಕ್ತರಿಗೆ ಪ್ರಸಾದ ಸಿದ್ಧಪಡಿಸಲು ಸೌರಶಕ್ತಿ ಒಲೆಗಳನ್ನು ಬಳಸುತ್ತಿರುವುದನ್ನು ನಾನು ಖುದ್ಧಾಗಿ ಕಂಡಿದ್ದೇನೆ ಎಂದು ಫಾರೂಕ್ ಅಬ್ದುಲ್ಲಾ ಅವರು ಹೇಳಿದರು.
ಮೊಬೈಲ್ ಟವರ್ಗಳಲ್ಲಿ ಡೀಸೆಲ್ ಬದಲು ಸೌರಶಕ್ತಿ ಬಳಕೆಗೆ ಸಲಹೆ !
ದೇಶದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮೊಬೈಲ್ ಟವರ್ ( ಸಂಚಾರಿ ದೂರವಾಣಿಗಳ ತರಂಗಗಳ ಪ್ರವಹಿಸುವ ಗೋಪುರಗಳು )ಗಳಿವೆ. ಪ್ರಸ್ತುತ ಅವುಗಳ ಕಾರ್ಯನಿರ್ವಹಣೆಗೆ ಡೀಸೆಲ್ ಜನರೇಟರ್ಗಳನ್ನು ಬಳಸಲಾಗುತ್ತಿದೆ. ಮೊಬೈಲ್ ಟವರ್ಗಳಲ್ಲಿ ಡೀಸೆಲ್ ಬದಲಿಗೆ ಸೌರಶಕ್ತಿ ಬಳಸುವಂತೆ ಸಲಹೆ ಮಾಡಿದ ಸಚಿವರು ಈ ನಿಟ್ಟಿನಲ್ಲಿ ಸಂಬಂಧಿತ ಸಂಸ್ಥೆಗಳಿಗೆ ಸೂಚಿಸಲು ಸನ್ನಿಹಿತದಲ್ಲಿಯೇ ತಾವು ಕೇಂದ್ರ ಸಂಪರ್ಕ ಮಂತ್ರಾಲಯದೊಂದಿಗೆ ಚರ್ಚಿಸುವುದಾಗಿ ಪ್ರಕಟಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಪರವಾಗಿ ಸಮಾರಂಭಕ್ಕೆ ಆಗಮಿಸಿದ್ದ ಗೃಹ ಸಚಿವ ಡಾ ವಿ. ಎಸ್. ಆಚಾರ್ಯ ಅವರು ಮಾತನಾಡಿ ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿನ ಮೊದಲ ಉಪಕ್ರಮ ಇಂಧನ ಉತ್ಪಾದನೆಗೆ ಆಧ್ಯತೆ ನೀಡುವುದಾಗಿತ್ತು ಎಂದ ಅವರು ಮುಂದಿನ ಐದು ವರ್ಷಗಳಲ್ಲಿ ರಾಜ್ಯ ಬೆಳಕಿನ ವರ್ಷದತ್ತ ಸಾಗಲಿದೆ ಎಂದು ಆಶಿಸಿದರು.
ವಿದ್ಯುತ್ ಕೊರತೆಯಿಂದಾಗಿ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಗ್ರಾಮೀಣ ಕೈಗಾರಿಕೆಗಳು ಸೊರಗುತ್ತಿವೆ ಎಂದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ. ಹೆಚ್. ಮುನಿಯಪ್ಪ ಅವರು ಮಾಲಿನ್ಯ-ರಹಿತ ಈ ಸೌರಶಕ್ತಿ ಬಳಕೆಯನ್ನು ಪ್ರೋತ್ಸಾಹಿಸಲು ಸಹಾಯ ಧನದ ಅನುಪಾತವನ್ನು ಯೋಜನಾ ವೆಚ್ಚದ ಶೇ.25ರಷ್ಟು ಹೆಚ್ಚಿಸುವಂತೆ ಡಾ ಅಬ್ದುಲ್ಲಾ ಅವರಲ್ಲಿ ಮನವಿ ಮಾಡಿದರು.