ನಿತ್ಯಾನಂದನ ಅಶ್ರಮ ಮೇಲೆ ಮತ್ತೆ ದಾಳಿ
ಬಿಡದಿ, ಜೂ.16: ಈಗಷ್ಟೇ ಜೈಲಿನಿಂದ ಹೊರಬಿದ್ದಿರುವ ನಿತ್ಯಾನಂದ ಮತ್ತೆ ವಿವಾದದಲ್ಲಿ ಸಿಲುಕಿದ್ದಾನೆ. ತನ್ನ ಆತ್ಮ ದೇಹ ಶುದ್ಧಿಗಾಗಿ ಕೈಗೊಂಡಿರುವ ಪಂಚಾಗ್ನಿ ತಪ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ ತುಪ್ಪದ ಬದಲು ನೀಲಿ ಬಣ್ಣದ ಸೀಮೆಎಣ್ಣೆ ಬಳಸಿದ್ದ ಆಶ್ರಮವಾಸಿಗಳ ಮೇಲೆ ಸರ್ಕಾರಿ ಅಧಿಕಾರಿಗಳು ದಾಳಿ ನಡೆಸಿದರು.
ಬಿಡದಿಯ ಆಶ್ರಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 180 ಲೀಟರ್ ಸೀಮೆಎಣ್ಣೆಯನ್ನು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ಇಂದು ವಶಪಡಿಸಿಕೊಂಡರು. ನಿತ್ಯಾನಂದನ ಪಂಚಾಗ್ನಿ ತಪಸ್ಸಿಗೆ ತುಪ್ಪದ ಬದಲು ನೀಲಿ ಸೀಮೆಎಣ್ಣೆ ಬಳಸಲಾಗುತ್ತಿದೆ ಎಂಬ ಖಚಿತ ವರ್ತಮಾನದ ಮೇರೆಗೆ ಇಲಾಖೆ ಇಂದು ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ.
ಬಡತನದ ರೇಖೆಗಿಂತ ಕೆಳಗಿರುವವರು ಹಾಗೂ ಬಡವರಿಗಾಗಿ ಪಡಿತರ ವಿತರಣೆ ಮೂಲಕ ಸರ್ಕಾರ ನೀಡುವ ನೀಲಿ ಸೀಮೆಎಣ್ಣೆ ಬಳಸಿರುವುದು ಅಪರಾಧವಾಗಿದೆ ಎಂದು ಉಪ ನಿರ್ದೇಶಕ ಶಂಭಯ್ಯ ಸುದ್ದಿಗಾರರಿಗೆ ತಿಳಿಸಿದರು. ರಾಮನಗರ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾದ ನಂತರ ನಿತ್ಯಾನಂದ ಬಿಡದಿ ಆಶ್ರಮದಲ್ಲಿ, ಪಂಚಾಗ್ನಿ ಯಜ್ಞ ಕೈಗೊಂಡಿದ್ದನು.