ಪುಷ್ಪಗಿರಿ ಮಡಿಲಲ್ಲಿ ಶಿಲಾಯುಗದ ಜನಜೀವನ !
ಸುತ್ತಲೂ ಬೆಟ್ಟಗುಡ್ಡಗಳು, ದಟ್ಟವಾದ ಅರಣ್ಯಗಳು ಇದರ ಮಧ್ಯೆ ಕಾಡಾನೆ ಸೇರಿದಂತೆ ಇತರೆ ವನ್ಯಮೃಗಗಳೊಂದಿಗೆ ಹೋರಾಡುತ್ತಾ ಭತ್ತ, ಏಲಕ್ಕಿ, ಕಾಫಿ ಕೃಷಿ ಮಾಡುತ್ತಾ ಥೇಟ್ ಕಾಡುಮನುಷ್ಯರಂತೆ ವಾಸಿಸುತ್ತಿರುವ ಇಲ್ಲಿನ ಜನರಿಗೆ ಮಳೆಗಾಲ ಬಂತೆಂದರೆ ಭಯ ಪ್ರಾರಂಭವಾಗುತ್ತದೆ.
ಈ ವ್ಯಾಪ್ತಿಯಲ್ಲಿ ಒಮ್ಮೆ ಮಳೆ ಪ್ರಾರಂಭವಾಯಿತೆಂದರೆ ಎಡೆಬಿಡದೆ ಸುರಿಯುತ್ತಿರುತ್ತದೆ. ಅತಿ ಹೆಚ್ಚು ಮಳೆ ಬೀಳುವುದರಿಂದ ಮಾಡಿದ ಕೃಷಿ ಬೆಳೆಗಳು ಕೊಳೆತು ಹೋಗಿ ನಷ್ಟವಾದರೆ, ಮತ್ತೊಂದೆಡೆ ಸುತ್ತಲಿನ ಹಳ್ಳಕೊಳ್ಳ, ನದಿ ತುಂಬಿ ಹರಿಯುವುದರಿಂದ ಸಂಪರ್ಕವೇ ಕಡಿದು ಹೋಗುತ್ತದೆ. ಈ ಸಂದರ್ಭ ಇಲ್ಲಿನ ಜನರು ಇತರೆ ಊರುಗಳ ಸಂಪರ್ಕವನ್ನು ಕಡಿದುಕೊಂಡು ಬಿಡುತ್ತಾರೆ.
ದೂರದ ಪಟ್ಟಣ ಸೋಮವಾರಪೇಟೆಗೆ ಹೋಗಬೇಕಾದರೆ ಕೊತ್ತನಳ್ಳಿ ಮೂಲಕ ಹೋಗಬೇಕು ಆದರೆ ಮಧ್ಯೆ ನದಿಯಿದ್ದು ಇದಕ್ಕೆ ಯಾವುದೇ ಸೇತುವೆಯಿಲ್ಲ. ಬೇಸಿಗೆಯಲ್ಲಿ ಕಲ್ಲಿನಿಂದ ಕಲ್ಲಿಗೆ ಹಾರುತ್ತಾ ಸರ್ಕಸ್ ಮಾಡಿಕೊಂಡು ಹೋಗುವ ಮಂದಿ ಮಳೆಗಾಲದಲ್ಲಿ ನರಕಯಾತನೆ ಅನುಭವಿಸುತ್ತಾರೆ.
ಏಕೆಂದರೆ, ಶಾಲೆಗೆ ತೆರಳುವ ವಿದ್ಯಾರ್ಥಿಗಳು, ಕಛೇರಿ ಕೆಲಸಕ್ಕೆ ಹೋಗುವವರು ಈ ನದಿಯನ್ನು ದಾಟಿ ಹೋಗಲೇ ಬೇಕು ಹಾಗಾಗಿ ಗ್ರಾಮದ ಜನರೇ ಮರದಿಂದ ಮರಕ್ಕೆ ಹಗ್ಗ ಹಾಗೂ ಬೆತ್ತದಿಂದ ಕಟ್ಟಿ ಅದಕ್ಕೆ ಕಾಡಿನಲ್ಲಿ ಸಿಗುವ ಬೈನೆ ಮರದ ಹಲಗೆಯನ್ನು ಜೋಡಿಸಿ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದಾರೆ.
ಈ ತೂಗು ಸೇತುವೆಯಲ್ಲಿ ಹಲಗೆಯಿಂದ ಹಲಗೆಗೆ ಮೆಟ್ಟುತ್ತಾ ಜಾಗರೂಕವಾಗಿ ದಾಟಬೇಕು ಆಯ ತಪ್ಪಿದರೆ ನದಿ ಪಾಲಾಗುವುದು ಖಂಡಿತಾ.... ಇಲ್ಲಿನ ಸಮಸ್ಯೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ನೀಡಿ ಗ್ರಾಮಸ್ಥರು ಸುಸ್ತಾಗಿದ್ದಾರೆ ಏನೂ ಪ್ರಯೋಜನವಾಗಿಲ್ಲ ಹಾಗಾಗಿ ನರಕ ಸದೃಶ್ಯ ಬದುಕು ಮುಂದುವರೆದಿದೆ.