ಕೋಟಿ ನೆರೆ ರೊಕ್ಕ ಲಪಟಾಯಿಸಿದ್ದವನ ಬಂಧನ
ಬಂಧಿತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ತಾಲೂಕಿನ ಜಿ.ಕೆ. ಬಸವರಾಜ್. ಹಣ ಲಪಟಾಯಿಸಿದ ನಂತರ ಬಾದಾಮಿ ಸೇರಿದ್ದ ಬಸವರಾಜ್ ಮಾಡಿದ ದೂರವಾಣಿ ಕರೆಗಳನ್ನು ಆಧರಿಸಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಬಾದಾಮಿಯಲ್ಲಿ ಇರುವ ಚಿಕ್ಕಮ್ಮಳ ಮನೆಯ ಹೊಲಗದ್ದೆಗಳಲ್ಲಿ ಹಣವನ್ನು ಹೂತಿದ್ದ, ಸ್ವಲ್ಪ ಬಂಗಾರ ಖರೀದಿ ಮಾಡಿದ್ದು ಅವನ್ನೂ ಹಣದ ಜೊತೆಯಲ್ಲಿ ಹೂತಿದ್ದ ಎಂದು ಹೇಳಲಾಗಿದೆ.
ಈ ಆರೋಪಿಯು ನೆರೆ ಸಂತ್ರಸ್ತರ ಕೈತಲುಪಬೇಕಾಗಿದ್ದ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ 1 ಕೋಟಿ 19 ಲಕ್ಷದ 20 ಸಾವಿರ ರು.ಗಳನ್ನು ಹಿರಿಯ ಅಧಿಕಾರಿಗಳಿಂದ ವಿವಿಧ ಸಂದರ್ಭಗಳಲ್ಲಿ 2 ಚೆಕ್ಗಳಿಗೆ ಸಹಿ ಪಡೆದು ಹೆಚ್ಚುವರಿ ಅಕ್ಷರ, ಸಂಖ್ಯೆಗಳನ್ನು ಸೇರಿಸಿ ಬೇರೆಯವರ ಹೆಸರುಗಳಲ್ಲಿ ಖಾತೆಯನ್ನು ತೆರೆದಿದ್ದ.
ಸಿರುಗುಪ್ಪ ತಾಲೂಕು ಪಂಚಾಯಿತಿಯ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಪಿ. ತಿಪ್ಪೇರುದ್ರಪ್ಪ ಅವರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಹಚ್ಚೊಳ್ಳಿ ಗ್ರಾಮ ಪಂಚಾಯಿತಿಯ ಲೆಕ್ಕಾಚಾರಗಳನ್ನು ಪರಿಶೀಲಿಸುವಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಬಸವರಾಜನನ್ನು ವಿವರ ಕೇಳಿದಾಗ ಮಾಹಿತಿ ನೀಡುವುದಾಗಿ ಹೇಳಿ ನಾಪತ್ತೆ ಆಗಿದ್ದ.
ಪಿ. ತಿಪ್ಪೇರುದ್ರಪ್ಪ ಅವರು ಹಚ್ಚೊಳ್ಳಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಮತ್ತು ಜಿಲ್ಲಾ ಪಂಚಾಯಿತಿಗೆ ಮಾಹಿತಿ ನೀಡಿದ್ದರು. ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್. ಮುತ್ತಯ್ಯ ಆರೋಪಿಯನ್ನು ಅಮಾನತು ಮಾಡಿ ಆದೇಶ ನೀಡಿದ್ದರು.
ಜಿ.ಕೆ. ಬಸವರಾಜ್ ಗದಗ್ ತಾಲೂಕಿನ ಮುಂಡರಗಿ ಗ್ರಾಮ ಮೂಲ ನಿವಾಸಿ. ಪರಿಶಿಷ್ಟ ಜಾತಿಯ ಇವರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆಗಿ ನೌಕರಿ ಮಾಡಿದ ಹಗರಿಬೊಮ್ಮನಹಳ್ಳಿ ತಾಲೂಕು, ಬಳ್ಳಾರಿ ತಾಲೂಕಿನ ಬೆಳಗಲ್ ಮತ್ತು ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿಯಲ್ಲಿ ಸೇವೆಯಿಂದ ನಿರಂತರವಾಗಿ ಅಮಾನತು ಆಗಿದ್ದ. ಈ ಹಿಂದೆ ಕೂಡ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆಗಿ ಕೆಲಸ ಮಾಡುತ್ತಿದ್ದಾಗ 5 ಲಕ್ಷಕ್ಕೂ ಹೆಚ್ಚಿನ ಹಣದ ದುರುಪಯೋಗ ಮಾಡಿದ ಆರೋಪ ಹೊತ್ತಿದ್ದ.