ಅಂತೂ ಇಂತೂ ಜೈಲಿನಿಂದ ಹೊರಬಂದ ನಿತ್ಯಾನಂದ
ರಾಮನಗರದ ನ್ಯಾಯಿಕ ದಂಡಾಧಿಕಾರಿ ಪುಷ್ಪಾವತಿ ಅವರ ಎದುರಿಗೆ ಕರ್ನಾಟಕ ಉಚ್ಚ ನ್ಯಾಯಾಲಯ ವಿಧಿಸಿದ್ದ ಷರತ್ತುಗಳನ್ನು ಪೂರೈಸಿರುವುದರಿಂದ ಬಿಡುಗಡೆ ಮಾಡಲು ದಂಡಾಧಿಕಾರಿ ಅನುಮತಿ ನೀಡಿದ್ದಾರೆ. ಜಾಮೀನು ಷರತ್ತಿನಂತೆ 1 ಲಕ್ಷ ರು. ಬಾಂಡ್ ಮತ್ತು ಯಲಹಂಕದ ಮನೆಯನ್ನು ಶ್ಯೂರಿಟಿಯನ್ನಾಗಿ ಒದಗಿಸಲಾಗಿದೆ.
ನಿತ್ಯಾನಂದನಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದಾಗಿನಿಂದ ಆತನ ಭಕ್ತರಲ್ಲಿ, ಅನುಯಾಯಿಗಳಲ್ಲಿ ಭಾರೀ ಸಂಭ್ರಮ ಮನೆಮಾಡಿದೆ. ಇಂದು ಬೆಳಗಿನಿಂದಲೇ ಜನರು ಕಾರಾಗೃಹದ ಮುಂದೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಯಾವಾಗ ಬಿಡುಗಡೆಯಾಗುತ್ತಾನೆಂದು ಕಾತರದಿಂದ ಕಾದಿದ್ದರು.
ಲೈಂಗಿಕ ವಿಡಿಯೋ ಬಹಿರಂಗವಾದ ನಂತರ ಅನೇಕ ಅನುಯಾಯಿಗಳು ಆಶ್ರಮದಿಂದ ಜಾಗ ಖಾಲಿ ಮಾಡಿದ್ದರು. ಇದ್ದಷ್ಟು ಭಕ್ತರು ನಿತ್ಯಾನಂದನ ಬಿಡುಗಡೆಗಾಗಿ ಕಳೆದ ಕೆಲ ದಿನಗಳಿಂದ ಪೂಜೆ ಪುನಸ್ಕಾರ, ಉಪವಾಸ, ಭಜನೆ, ಪ್ರಾರ್ಥನೆಗಳಲ್ಲಿ ತೊಡಗಿದ್ದರು. ಕಾರಾಗೃಹದಿಂದ ಹೊರಬಂದ ನಂತರ ನಿತ್ಯಾನಂದ ನೇರವಾಗಿ ಬಿಡದಿ ಆಶ್ರಮಕ್ಕೆ ಹೋಗುತ್ತಾನೆನ್ನಲಾಗಿದೆ. ಆಶ್ರಮದಲ್ಲಿ ನಿತ್ಯಾನಂದನನ್ನು ಭವ್ಯವಾಗಿ ಸ್ವಾಗತಿಸಲು ಭಕ್ತಾದಿಗಳು ಸಜ್ಜಾಗಿದ್ದಾರೆ.
ಜಾಮೀನು ಷರತ್ತಿನ ಪ್ರಕಾರ ಬಿಡುಗಡೆಯಾದ ನಂತರ ನಿತ್ಯಾನಂದ ಪ್ರತಿ 15 ದಿನಗಳಿಗೊಮ್ಮೆ ಪೊಲೀಸ್ ಠಾಣೆಗೆ ಹೋಗಿ ಸಹಿ ಹಾಕಬೇಕಾಗಿದೆ. ಸಿಐಡಿ ಆತನ ಪಾಸ್ಪೋರ್ಟ್ ವಶಪಡಿಸಿಕೊಂಡಿರುವುದರಿಂದ ವಿದೇಶಕ್ಕೂ ತೆರಳುವಂತಿಲ್ಲ. ನಿರ್ದೋಷಿ ಎಂದು ಸಾಬೀತಾಗುವವರೆಗೂ ಮೊದಲಿನಂತೆ ಭಕ್ತಾದಿಗಳನ್ನು ಮುಂದೆ ಕೂಡಿಸಿಕೊಂಡು ಉಪದೇಶಾಮೃತವನ್ನು ಉಣಬಡಿಸುವಂತಿಲ್ಲ.
ನಟಿ ರಂಜಿತಾ ಜೊತೆ ಪಲ್ಲಂಗದ ಮೇಲೆ ರಾಸಲೀಲೆಯಾಡಿದ ವಿಡಿಯೋ ಬಹಿರಂಗವಾದ ನಂತರ ನಿತ್ಯಾನಂದ ಉತ್ತರ ಭಾರತಕ್ಕೆ ಪಲಾಯನಗೈದಿದ್ದ. ಆತನನ್ನು ಸಿಐಡಿ ಪೊಲೀಸರು ಹಿಮಾಚಲ ಪ್ರದೇಶದಲ್ಲಿ ಬಂಧಿಸಿ ರಾಮನಗರ ಜೈಲಿನಲ್ಲಿ ಇಟ್ಟಿದ್ದರು. ಜೈಲಿನಲ್ಲಿಯೂ ಕೈದಿಗಳನ್ನು ಕೂಡಿಸಿಕೊಂಡು ಧ್ಯಾನ, ಭಜನೆಗಳನ್ನು ನಿತ್ಯಾನಂದ ಮಾಡುತ್ತಿದ್ದ. ಕೆಳ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದ್ದರಿಂದ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿ ಸಿಐಡಿ ಸಾಕ್ಷ್ಯ ಒದಗಿಸಲು ವಿಫಲವಾಗಿದ್ದರಿಂದ ಜೂನ್ 11ರಂದು ರಾಜ್ಯ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು.