ಶುಕ್ರವಾರ ನಿತ್ಯಾನಂದ ಜಾಮೀನು ಅರ್ಜಿ ತೀರ್ಪು
ಹಿಮಾಚಲ ಪ್ರದೇಶದಲ್ಲಿ ಏಪ್ರಿಲ್ 21ರಂದು ಬಂಧಿಯಾದ ನಂತರ ಕಳೆದ ಒಂದೂವರೆ ತಿಂಗಳಿನಿಂದ ರಾಮನಗರ ಜೈಲಿನಲ್ಲಿರುವ ನಿತ್ಯಾನಂದನ ಜಾಮೀನು ಅರ್ಜಿಯನ್ನು ಕೆಲ ನ್ಯಾಯಾಲಯ ತಿರಸ್ಕರಿಸಿದೆ.
ಉಚ್ಚ ನ್ಯಾಯಾಲಯದಲ್ಲಿ ನಿತ್ಯಾನಂದನನ್ನು ಪ್ರತಿನಿಧಿಸಿರುವ ವಕೀಲ ಬಿವಿ ಆಚಾರ್ಯ ಅವರು, ನಿತ್ಯಾನಂದ ತನ್ನನ್ನು ತಾನು ಸನ್ಯಾಸಿ ಎಂದೂ ಬಿಂಬಿಸಿಲ್ಲ. ಆತ ಒಬ್ಬ ಧಾರ್ಮಿಕ ಗುರುವಾಗಿದ್ದು ಮದುವೆಯಾದವರು ಕೂಡ ಧ್ಯಾನ ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಾರೆ. ನಿತ್ಯಾನಂದ ಮದುವೆಯನ್ನು ಯಾವತ್ತೂ ವಿರೋಧಿಸಿಲ್ಲ ಎಂದು ವಾದಿಸಿದ್ದಾರೆ. ಆದರೆ, ಇದನ್ನು ವಿರೋಧಿಸಿರುವ ಸರಕಾರಿ ವಕೀಲರು, ಆತ ಗಂಭೀರವಾದ ಆರೋಪಗಳನ್ನು ಎದುರಿಸುತ್ತಿದ್ದಾನೆ. ತನಿಖೆ ಇನ್ನೂ ಜಾರಿಯಿರುವುದರಿಂದ ಜಾಮೀನು ನೀಡಬಾರದೆಂದು ಆಗ್ರಹಿಸಿದ್ದಾರೆ.
ನಟಿ ರಂಜಿತಾ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವಿಡಿಯೋ ಬಹಿರಂಗವಾದ ನಂತರ ನಿತ್ಯಾನಂದ ತಲೆಮರೆಸಿಕೊಂಡು ಉತ್ತರ ಭಾರತಕ್ಕೆ ಪಲಾಯನ ಮಾಡಿದ್ದ. ಸಿಐಡಿ ಪೊಲೀಸರು ಏಪ್ರಿಲ್ 21ರಂದು ಬಂಧಿಸಿದ್ದರು. ರಾಮನಗರ ಜೈಲಿನಲ್ಲಿ ಕೂಡ ಧ್ಯಾನ ಶಿಬಿರಗಳನ್ನು ಮಾಡುತ್ತ ನಿತ್ಯಾನಂದ ಕಾಲ ಕಳೆಯುತ್ತಿದ್ದಾನೆ. ಬಿಡದಿಯಲ್ಲಿ ಆತನ ಅನುಯಾಯಿಗಳು ನಿತ್ಯಾನಂದನ ಶೀಘ್ರ ಬಿಡುಗಡೆಗೆ ಪೂಜೆ ಪುನಸ್ಕಾರಗಳನ್ನು ಮಾಡುತ್ತ ಆತನ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.