ಎರಡನೇ ಮದುವೆಗೆ ನಿಂತ ಇವ ಗಂಡನಲ್ಲ ಭಂಡ
ಈ ಘಟನೆ ನಡೆದಿರುವುದು ಮುಂಬೈನಲ್ಲಿ. ಮೊದಲನೇ ಹೆಂಡತಿಗೆ ವಿಚ್ಛೇದನ ನೀಡದೆ ಎರಡನೇ ಮದುವೆಗೆ ಸಿದ್ಧವಾಗಿದ್ದ ಗಂಡು ಡಾ. ದಿಲೀಪ್ ಚೌಹಾಣ್. ತನ್ನ ಪತಿ ಸಾಕ್ಷಾತ್ ಶ್ರೀರಾಮಚಂದ್ರ ಎಂದೆಣಿಸಿದ್ದ ರಮಾ ಸಿಂಗ್ ಗೆ ಗಂಡನ ಲೀಲೆಗಳನ್ನು ಕೇಳಿದಾಗ ಆಘಾತವಾಗಿತ್ತು.
ಆರತಕ್ಷತೆಗೆ ಇನ್ನೇನು ಗಂಡು ಹೆಣ್ಣು ಹಾರ ಬದಲಾಯಿಸಿಕೊಳ್ಳಬೇಕು, ಆಗ ಥೇಟ್ ಬಾಲಿವುಡ್ ಚಿತ್ರದಂತೆ ಮದುವೆ ಮಂಟಪ ಪ್ರವೇಶ ಮಾಡಿದ ರಮಾ ಸಿಂಗ್ 'ನಿಲ್ಲಿಸಿ' ಎಂದು ಕೂಗಿದ್ದಾಳೆ. ಆದರೆ ಅಷ್ಟರಲ್ಲಾಗಲೇ ದಿಲೀಪ್ ಸಿಂಗ್ ಎರಡನೇ ಹೆಂಡತಿಗೆ ತಾಳಿ ಬಿಗಿದಾಗಿತ್ತು.
ಉತ್ತರ ಪ್ರದೇಶದಿಂದ ಆಗಮಿಸಿದ್ದ ರಮಾ ಮತ್ತು ಮನೆಯವರನ್ನು ಮನಬಂದಂತೆ ಬಾರಿಸಿದ್ದಾನೆ ದಿಲೀಪ್. ಆತನನ್ನು ತುಂಬಾ ಪ್ರೀತಿಸುತ್ತಿದ್ದೆ ಆದರೂ ಹೀಗೆ ಮಾಡಿದ್ದಾನೆ. ಇನ್ನೆಷ್ಟು ಹೆಂಗಳೆಯರನ್ನು ಈ ರೀತಿ ವಂಚಿಸಿದ್ದಾನೋ ಗೊತ್ತಿಲ್ಲ ಎಂದು ರಮಾ ಅಲವತ್ತುಕೊಂಡಿದ್ದಾಳೆ.
ಈ ಘಟನೆಗೂ ಬೆಂಗಳೂರಿನ ಪ್ರೇಮ ವಂಚಿತೆ ಪ್ರಿಯಾಂಕಾಳ ಘಟನೆಗೂ ಅಂತಹ ವ್ಯತ್ಯಾಸವೇನಿಲ್ಲ. ಪ್ರಿಯಾಂಕಾ ಕೂಡ ಪ್ರಿಯಕರನ ಮದುವೆ ಮಂಟಪಕ್ಕೆ ನುಗ್ಗಿ ಮದುವೆ ತಡೆಯಲು ಯತ್ನಿಸಿದ್ದಳು. ಮೊನ್ನೆ ತಾನೆ ಪ್ರಿಯಕರನನ್ನು ನಂಬಿ ಗಂಡನಿಗೆ ವಿಚ್ಛೇದನ ನೀಡಿ ಪ್ರಿಯಕರನಿಂದಲೇ ಬೆಂಗಳೂರಿನ ಮಹಿಳೆಯೊಬ್ಬಳು ವಂಚನೆಗೊಳಗಾಗಿದ್ದಳು. ಮಹಿಳೆಯರು ಎಚ್ಚೆತ್ತುಕೊಳ್ಳುವವರೆಗೆ ಇಂತಹ ಘಟನೆಗಳು ಪುನರಾವರ್ತಿತವಾಗುತ್ತಲೇ ಇರುತ್ತವೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323, 504 ಮತ್ತು 506ರಲ್ಲಿ ದಿಲೀಪ್ ವಿರುದ್ಧ ಮೊಕದ್ದಮೆ ಹೂಡಲಾಗಿದೆ.