ಪರಿಹಾರ ನಿಧಿ ಚೆಕ್ ತಿದ್ದಿ ಕೋಟಿರೂ ವಂಚನೆ
ಆಶ್ಚರ್ಯಪಡಬೇಡಿ, ಶತಮಾನಗಳ ಇತಿಹಾಸ ಇರುವ ಕಾಂಗ್ರೆಸ್ ಸರ್ಕಾರದ ಜವಾಬ್ದಾರಿಯುತ ಹುದ್ದೆಗಳಲ್ಲಿ ಇರುವವರೇ ನೆರೆ ಸಂತ್ರಸ್ತರ ಹಣವನ್ನು ದುರ್ಬಳಕೆ ಮಾಡಿಕೊಂಡಿರುವಾಗ ಗ್ರಾಮ ಪಂಚಾಯಿತಿಯ ಓರ್ವ ಕಾರ್ಯದರ್ಶಿಯದ್ದನ್ನೇ 'ಸುದ್ದಿ'ಯೇ ಅಲ್ಲ, ಎಂದು ಮೂಗು ಮುರಿಯಬೇಡಿ.
ಈ ಕಾರ್ಯದರ್ಶಿ ಲಪಟಾಯಿಸಿದ ಹಣ ಒಟ್ಟು 1 ಕೋಟಿ 19 ಲಕ್ಷ 20೦ ಸಾವಿರ ರು.ಗಳನ್ನೇ ನುಂಗಿದ್ದಾನೆ. ನೆರೆಯನ್ನು ಸಂತ್ರಸ್ತರು ಮರೆತು, ಬಿಸಿಲ ತಾಪಕ್ಕೆ ತತ್ತರಿಸಿ, ಆಷಾಢದ ಗಾಳಿಗೆ ಸಿಲುಕುವ ಆತಂಕದಲ್ಲಿ ಇರುವಾಗ ಈ 'ಸುದ್ದಿ' ಬಯಲಾಗಿದೆ.
ಈತನು ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನವಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿ ಬಿಡುಗಡೆ ಮಾಡಿದ್ದ 1,19,20,000 ರು. ಅನುದಾನವನ್ನು ದುರುಪಯೋಗ ಮಾಡಿಕೊಂಡ ಶಿರಗುಪ್ಪ ತಾಲ್ಲೂಕಿನ ಹಚ್ಚೊಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಜಿ.ಕೆ. ಬಸವರಾಜ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗಿದೆ. ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಮುತ್ತಯ್ಯ ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿಯಿಂದ ನವಗ್ರಾಮಗಳಿಗೆ ಕುಡಿಯುವ ನೀರು, ಚರಂಡಿ, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಅನುದಾನವನ್ನು ಹಚ್ಚೊಳ್ಳಿ ಗ್ರಾಮ ಪಂಚಾಯಿತಿಗೆ ಬಿಡುಗಡೆ ಮಾಡಲಾಗಿತ್ತು.
ಗ್ರಾಮ ಪಂಚಾಯಿತಿಯು ಈ ಅನುದಾನವನ್ನು ಜಿಲ್ಲಾ ಪಂಚಾಯತ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ನೀಡಬೇಕಾಗಿತ್ತು. ಕಾರ್ಯದರ್ಶಿ ಜಿ.ಕೆ. ಬಸವರಾಜ್ ಈ ಅನುದಾನವನ್ನು 1.12 ಕೋಟಿ ಮತ್ತು 19.08 ಲಕ್ಷ ರೂ.ಗಳ 2 ಚೆಕ್ ಗಳನ್ನು ಬಿ. ಅಜ್ಜಯ್ಯ ಎನ್ನವ ಹೆಸರಿಗೆ ತಿದ್ದುಪಡಿ ಮಾಡಿದ್ದಾನೆ.
ಬಳ್ಳಾರಿಯಲ್ಲಿರುವ ಐಡಿಬಿಐ ಬ್ಯಾಂಕಿನಲ್ಲಿ ಬಿ. ಅಜ್ಜಯ್ಯ ಅವರ ಹೆಸರಿಗೆ ತೆರೆದ ಖಾತೆಗೆ ಜಮಾ ಮಾಡಿದ್ದಾನೆ. ನಂತರ ಹಚ್ಚೊಳ್ಳಿಯಲ್ಲಿರುವ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ನಗದೀಕರಣ ಮಾಡಿಕೊಂಡು ಪರಾರಿಯಾಗಿದ್ದಾನೆ.
ಇವರ ವಿರುದ್ಧ ಸಿರಗಪ್ಪ ತಾಲ್ಲೂಕ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಪಿ. ತಿಪ್ಪೇರುದ್ರಪ್ಪ ಅವರು ಹಚ್ಚೊಳ್ಳಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದಮ್ಮೆಯನ್ನು ದಾಖಲಿಸಿದ್ದಾರೆ. ಪ್ರಾಥಮಿಕ ಹಂತವಾಗಿ ಬಸವರಾಜ್ ಅವರನ್ನು ಅಮಾನತು ಮಾಡಲಾಗಿದ್ದು, ತನಿಖೆ ನಡೆದಿದೆ.