ನೆರೆ ದೇಣಿಗೆ ಬಳಸುವ ದುರ್ಗತಿ ನಮಗೆ ಬಂದಿಲ್ಲ
ನೆರೆ ಪರಿಹಾರ ನಿಧಿಯನ್ನು ಕಾಂಗ್ರೆಸ್ ದುರ್ಬಳಕೆ ಮಾಡಿದೆ ಎಂಬ ಸುದ್ದಿ ಕೇಳಿ ನನ್ನ ಕಣ್ಣಲ್ಲಿ ನೀರು ಬಂತು. ಮಾನವೀಯತೆಗೆ ಬೆಲೆ ಕೊಡುವ ಪಕ್ಷ ನಮ್ಮದು ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಇಂದು ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೆರೆ ಪರಿಹಾರಕ್ಕಾಗಿ ದೇಣಿಗೆ ಪಡೆದಿದ್ದಕ್ಕೆಲ್ಲಾ ರಸೀದಿ ಕೊಟ್ಟ್ಟಿದ್ದೇವೆ. ಕ್ರಾಸ್ಡ್ ಚೆಕ್ ಬಳಸಲಾಗುತ್ತದೆ. ಅಂತರಿಕ ಆಡಿಟಿಂಗ್ ನಡೆಯುತ್ತದೆ. ಕೇವಲ ಬ್ಯಾಂಕ್ ಸ್ಟೇ ಟ್ ಮೆಂಟ್ ಆಧಾರ ಮಾಡಿಕೊಂಡು ಆರೋಪ ಹೊರೆಸುವುದು ಸರಿಯಲ್ಲ.ಇಷ್ಟಾದರೂ ತನಿಖೆ ಮಾಡಿ ಆರೋಪ ಸಾಬೀತಾದರೆ ಯಾವುದೇ ಶಿಕ್ಷೆಗೂ ನಾವು ರೆಡಿ ಎಂದು ದೇಶಪಾಂಡೆ ಹೇಳಿದರು.
ಕೆನರಾ ಬ್ಯಾಂಕ್ ನಲ್ಲಿ ಎಫ್ ಡಿ ಮಾಡಿದರೆ ಹೆಚ್ಚು ಬಡ್ಡಿ(ಶೇ.9ರಷ್ಟು ಬಡ್ಡಿ) ಬರುತ್ತದೆ ಎಂದು ಪ್ರತ್ಯೇಕ ನಿಧಿ ಖಾತೆ ತೆರೆಯಲಾಯಿತು. ದೀರ್ಘಾವಧಿ ಠೇವಣಿ ಇಟ್ಟಿದ್ದಕ್ಕೆ ನನ್ನ ಪ್ರಶಂಸಿಸುವ ಬದಲು ಆರೋಪ ಹೊರೆಸುತ್ತಿರಲ್ಲ ಎಂದರು.
ಜಾಹೀರಾತು ಹಾಗೂ ಟೀ ಶರ್ಟ್ ಗೆ ಹಣ ನೀಡಿರುವುದನ್ನು ಒಪ್ಪಿಕೊಂಡ ದೇಶಪಾಂಡೆ, ಸಂತ್ರಸ್ತರಿಗೆ ಪರಿಹಾರ ನೀಡುವಾಗ ಯುವ ಕಾರ್ಯಕರ್ತರಿಗೆ ಟೀ ಶರ್ಟ್ ನೀಡಲಾಗಿದ್ದು ಇದಕ್ಕೆ 19 ಸಾವಿರ ಖರ್ಚಾಗಿದೆ. ಎಂವಿ ರಾಜಶೇಖರ್ ಪ್ರಯಾಣ ಭತ್ಯೆ 13ಸಾವಿರ ನೀಡಿದ್ದು ನಿಜ.
ಇನ್ನೂ ನೆರೆ ಪರಿಹಾರ ವರದಿ ಮುದ್ರಣ, ಜಾಹೀರಾತಿಗೆ ಹಣ ಬಳಸಲಾಗಿದೆ ಇದರಲ್ಲಿ ತಪ್ಪೇನಿದೆ ಎಂದು ದೇಶಪಾಂಡೆ ಪ್ರಶ್ನಿಸಿದರು. ಕೆಪಿಸಿಸಿಗೆ, ನನಗೆ ಕೆಟ್ಟ ಹೆಸರು ತರಲು ಮಾಡಿರುವ ಷಡ್ಯಂತ್ರ ಇದಾಗಿದೆ. ತನಿಖೆ ಮಾಡಿ ನಂತರ ಆರೋಪ ಹೊರೆಸಿ, ತಪ್ಪಿತಸ್ಥನಾದರೆ ಯಾವುದೇ ರೀತಿಯ ಶಿಕ್ಷೆ ಅನುಭವಿಸಲು ಸಿದ್ಧ ಎಂದರು.