ತ್ಯಾಜ್ಯದಿಂದ ಹೊರಹೊಮ್ಮಿದೆ 'ಕಸ್ತೂರಿ' ಪರಿಮಳ
ಮುಂಬೈನ ಪೂನಮ್ ಕಸ್ತೂರಿ ಕಸದಿಂದಲೇ ಉತ್ತಮ ಸಾವಯವ ಗೊಬ್ಬರ ತಯಾರಿಸಿ ಅದನ್ನು ಮಾರಾಟ ಮಾಡಿ ಯಶಸ್ವಿ ಉದ್ಯಮಿ ಆಗಿದ್ದಾರೆ. 2006ರಲ್ಲಿ ಸಾಮಾಜಿಕ ಕಳಕಳಿಯಿಂದಷ್ಟೇ ಪ್ರಾರಂಬಿಸಿದ ಅಡುಗೆಮನೆ ತ್ಯಾಜ್ಯವನ್ನು ಬಳಸಿ ಸಾವಯವ ಗೊಬ್ಬರ ತಯಾರಿಸುವ ಪೂನಮ್ ಕಸ್ತೂರಿ ಅವರ ಕಂಪನಿ ಡೈಲಿ ಡಂಪ್ ಇಂದು ವಾರ್ಷಿಕ 36 ಲಕ್ಷ ರೂಪಾಯಿಗಳಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ.
ಈ ಕಂಪನಿಗೆ ಇಂದು ಬೆಂಗಳೂರೊಂದರಲ್ಲೇ 4500 ಗ್ರಾಹಕರಿದ್ದಾರೆ. ಡೈಲಿ ಡಂಪ್ ನ ಮೊದಲ ವರ್ಷದ ವಹಿವಾಟು ಕೇವಲ 2 ಲಕ್ಷ ರೂಪಾಯಿಗಳಾಗಿತ್ತು. 2008ರಲ್ಲಿ ವಾರ್ಷಿಕ ವಹಿವಾಟು 12 ಲಕ್ಷ ರೂಪಾಯಿಗಳಿಗೇರಿತು. ನಗರಗಳಲ್ಲಿ ಇಂದಿಗೂ ಅಡುಗೆಮನೆ ತ್ಯಾಜ್ಯವನ್ನು ರಸ್ತೆಗಳಲ್ಲಿ ಸುರಿಯಲಾಗುತಿದ್ದು, ರಸ್ತೆಗಳ ಶೇ. 60ರಷ್ಟು ಕಸ ಅಡುಗೆಮನೆಯಿಂದಲೇ ಬರುತ್ತಿದೆ. ಇದನ್ನು ಪ್ರತಿಯೊಬ್ಬರೂ ಸಮರ್ಥವಾಗಿ ನಿರ್ವಹಣೆ ಮಾಡಿ ತಾವೇ ಸ್ವತಃ ಗೊಬ್ಬರ ತಯಾರಿಸಿಕೊಂಡರೆ ನಗರಗಳ ಸ್ವಚ್ಛತೆಯ ಜತೆಗೇ ನಗರದ ಅಂದವೂ ಹೆಚ್ಚುತ್ತದೆ ಎಂದು ಕಸ್ತೂರಿ ಹೇಳುತ್ತಾರೆ.
ಕಂಪನಿ ತಯಾರಿಸುವ ಸಾವಯವ ಗೊಬ್ಬರಕ್ಕೆ ದೆಹಲಿ,ಗೋವಾ, ಕೋಲ್ಕತಾ, ಹೈದರಾಬಾದ್ ನಲ್ಲೂ ಗ್ರಾಹಕರಿದ್ದಾರೆ. ಕಸ್ತೂರಿ ತಯಾರಿಸುವ ವಿವಿಧ ಶ್ರೇಣಿಯ ಸಾವಯವ ಗೊಬ್ಬರಗಳು ಪ್ರತೀ ಮನೆಗೆ ಸರಿ ಹೊಂದುತ್ತವೆ. ಸಾವಯವ ಗೊಬ್ಬರವನ್ನು ಬಳಸಲು ಮೊದಲಿಗೆ ಜನ ವಾಸನೆ, ಇರುವೆ, ಹುಳು ಕಾಟ ಎಂದು ಹಿಂಜರಿದರಾದರೂ, ಅದರಿಂದ ಆಗುವ ಲಾಭವನ್ನು ಮನಗಂಡು ಬಳಸಲು ಮುಂದೆ ಬರುತ್ತಿದ್ದಾರೆ ಎಂದ ಕಸ್ತೂರಿ ಅವರು ಮನೆಗಳಲ್ಲೇ ತಯಾರಿಸಿದ ಉತ್ತಮ ಗುಣಮಟ್ಟದ ಸಾವಯವ ಗೊಬ್ಬರವನ್ನು ಖರೀದಿಸಲೂ ಕಂಪನಿ ಸಿದ್ದ ಎಂದರು.
ಇದೇ ರೀತಿಯ ಘಟಕವನ್ನು ಸ್ಥಾಪಿಸಲು ದೇಶದ ಯಾವುದೇ ಭಾಗದಿಂದ ಯಾರೇ ಮುಂದೆ ಬಂದರೂ ಅವರಿಗೆ ಎಲ್ಲಾ ರೀತಿಯ ತಂತ್ರಜ್ಞಾನ ಸಹಕಾರ ನೀಡುವದಾಗಿ ಹೇಳುವ ಕಸ್ತೂರಿ ಅವರು ಚಿಲ್ಲರೆ ಅಂಗಡಿಗಳಲ್ಲಿ ಸಾವಯವ ಗೊಬ್ಬರ ಮಾರಾಟ ಮಾಡಿದರೆ ಮಾರುಕಟ್ಟೆಗೆ ಅನುಕೂಲವಾಗುತ್ತದೆ ಎಂದರು.