ನಮ್ಮಿಂದ ತಪ್ಪಾಗಿದ್ದರೆ ಶಿಕ್ಷೆಗೆ ಸಿದ್ಧ: ಡಿಕೆಶಿ
ನಮ್ಮಿಂದ ತಪ್ಪಾಗಿದ್ದರೆ ಶಿಕ್ಷೆ ಅನುಭವಿಸ್ತೀವಿ. ಎಂವಿ ರಾಜಶೇಖರನ್ ಅವರ ವಿಮಾನಯಾನ ಭತ್ಯೆ ಭರಿಸುವ ಅಗತ್ಯ ಕೆಪಿಸಿಸಿಗೆ ಇಲ್ಲ. ಅಕಸ್ಮಾತ್ ತುರ್ತು ಸಂದರ್ಭದಲ್ಲಿ ಹಣ ಬಳಸಿದ್ದರೂ ಮತ್ತೆ ಖಾತೆ ಹಣ ಜಮೆ ಮಾಡಲಾಗುತ್ತಿತ್ತು. ಎಂವಿ ರಾಜಶೇಖರನ್ ಅವರಿಗೆ ಫ್ಲೈಟ್ ಟಿಕೆಟ್ ಕೊಳ್ಳಲು ಶಕ್ತಿಯಿದೆ.
ನಾವು ಯಾವುದೇ ಕಾರಣಕ್ಕೂ ನೆರೆ ಪರಿಹಾರ ನಿಧಿ ಯನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಪೂರ್ಣ ಮಾಹಿತಿ ಪಡೆದು ನಂತರವಷ್ಟೇ ಮಾತನಾಡುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನೆರೆ ನಿಧಿ ದುರ್ಬಳಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಆಜೀವ ಖಜಾಂಚಿ ಶಾಮನೂರು ಶಿವಶಂಕರಪ್ಪ ಅವರು, ನನಗೆ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನಾನು ನೆರೆ ಪರಿಹಾರ ಸಂಬಂಧಿತ ಯಾವುದೇ ಚೆಕ್ ಗಳಿಗೆ ಸಹಿ ಹಾಕಿಲ್ಲ ಎಂದಿದ್ದಾರೆ.
ಈ ನಡುವೆ ವಸಂತನಗರದಲ್ಲಿರುವ ಕೆಪಿಸಿಸಿ ಕಚೇರಿಗೆ ಧಾವಿಸಿರುವ ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರು ಕಡತಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಮಾಧವನಗರದ ಕೆನರಾ ಬ್ಯಾಂಕ್ ಶಾಖೆಯ 0788101056855 ಸಂಖ್ಯೆಯ ಖಾತೆಯಿಂದ ಕಾಂಗ್ರೆಸ್ ಪಕ್ಷದ ಅಧಿಕೃತ ಖಾತೆಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ಕೂಡಾ ದೇಶಪಾಂಡೆ ಪ್ರತಿಕ್ರಿಯಿಸಿಲ್ಲ.