ಗುರುವಿಗೆ ಶಬರಿಯಂತೆ ಕಾದಿರುವ ನಿತ್ಯಾನಂದ ಭಕ್ತರು
ರಾಮನಗರ, ಜೂ. 7 : ನಿತ್ಯಾನಂದ ಜೈಲುವಾಸಿ 6 ವಾರ ಕಳೆದರೂ ಪಲ್ಲಂಗ ಪ್ರವೀಣನಿಗೆ ಜಾಮೀನು ಸಿಗದೇ ಜೈಲಿನ ಕಂಬಿಗಳ ಹಿಂದೆಯೇ ಕಾಲಕಳೆಯುತ್ತಿದ್ದಾನೆ. ನಿತ್ಯಾನಂದನ ಜಾಮೀನಿಗಾಗಿ ಈಗಾಗಲೇ ಇಬ್ಬರು ವಕೀಲರು ಬದಲಾಗಿ ಮುಂಬೈನ ವಕೀಲ ವಿವೇಕಾನಂದಗುಪ್ತ ವಾದಗಳನ್ನ ಮಂಡಿಸುತ್ತಿದ್ದರೂ ಹೈಕೋರ್ಟ್ ಮಾತ್ರ ನಿತ್ಯಾನಂದನಿಗೆ ಬಿಡುಗಡೆ ಭಾಗ್ಯವನ್ನ ಕರುಣಿಸಿಲ್ಲ.
ಒಂದೆಡೆ ನಿತ್ಯಾನಂದ ಜೈಲಿನ ಹಕ್ಕಿಯಾಗಿದ್ದಾನೆ, ಇನ್ನೊಂದೆಡೆ ನಿತ್ಯಾನಂದನ ಭಕ್ತ ಸಮೂಹ ತನ್ನ ಗುರುದರ್ಶನವಿಲ್ಲದೇ ಬಿಡದಿಯ ಧ್ಯಾನಪೀಠದಲ್ಲೇ ಗುರುವಿಗಾಗಿ ಶಬರಿಯಂತೆ ಕಾಯುತ್ತಿದೆ. ಈ ನಡುವೆ ನಿನ್ನೆಯಿಂದ ನಿತ್ಯಾನಂದನ ಭಕ್ತರು ನಿತ್ಯಾನಂದನ ಬಿಡುಗಡೆಗಾಗಿ ಬಿಡದಿಯ ಧ್ಯಾನಪೀಠದ ಆನಂದೇಶ್ವರಸ್ವಾಮಿಯ ಎದುರು ನಿರಾಹಾರ ಭಜನೆ ಪ್ರಾರ್ಥನೆ ಮಾಡುತ್ತಾ ದೇವರ ಮೊರೆಹೋಗಿದ್ದಾರೆ.
ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಹೈಕೊರ್ಟ್ನಲ್ಲಿ ವಿಚಾರಣೆ ಆರಂಭವಾಗಿ ನಿತ್ಯಾನಂದನ ಪರವಾಗಿ ಮುಂಬೈ ವಕೀಲರ ದಂಡು ವಾದ ಮಾಡುತ್ತಿದ್ದರೂ ನಿತ್ಯಾನಂದನಿಗೆ ಜಾಮೀನು ಸಿಗಲಿಲ್ಲ. ಈ ನಡುವೆ ನಿತ್ಯಾನಂದನ ಭಕ್ತರು ಬಿಡದಿಯ ಧ್ಯಾನಪೀಠದಲ್ಲಿ ಆಹಾರಸೇವಿಸದೇ ನಿರಾಹಾರರಾಗಿ ನಿನ್ನೆಯಿಂದ ಎರಡು ದಿನಗಳ ಕಾಲ ಆನಂದೇಶ್ವರಸ್ವಾಮಿಯ ಎದುರು ಶ್ವೇತವಸ್ತ್ರದಾರಿಗಳಾಗಿ ಭಜನೆ ಮಾಡುತ್ತ ನಿತ್ಯಾನಂದನ ಬಿಡುಗಡೆಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಧ್ಯಾನಪೀಠದಲ್ಲಿ ಯೋಗ ಧ್ಯಾನದ ಮೂಲಕ ಮತ್ತೆ ಹೊಸಚೈತನ್ಯ ಮೂಡಿಸಲಿ ಎಂಬ ಉದ್ದೇಶಕ್ಕಾಗಿ ಮಾಡುತ್ತಿದ್ದೇವೆಂದು ನಿರಾಹಾರ ಪ್ರಾರ್ಥನೆಯಲ್ಲಿ ತೊಡಗಿರುವ ನಿತ್ಯಾನಂದನ ಪರಮಭಕ್ತ ಸಂತೋಷಾನಂದ ಹೇಳಿದ್ದಾರೆ. ಮಹಿಳಾ ಭಕ್ತರು ಮತ್ತು ಪುರುಷ ಭಕ್ತರು ಬಿಡದಿಯ ಧ್ಯಾನಪೀಠದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇಂದಿಗೂ ಇದ್ದಾರೆ. ನಿತ್ಯಾನಂದನ ಕಾಮಪುರಾಣ ಬೆತ್ತಲಾಗಿ ನಿತ್ಯಾನಂದ ಜೈಲುಹಕ್ಕಿಯಾಗಿದ್ದರೂ ನಿತ್ಯಾನಂದನ ಭಕ್ತರು ಮಾತ್ರ ಧ್ಯಾನಪೀಠವಾಸಿಗಳಾಗಿಯೇ ನಿತ್ಯಾನಂದನನ್ನ ನಿತ್ಯವೂ ಆರಾಧಿಸಿ ಪೂಜಿಸುತ್ತಿದ್ದಾರೆ.
ನಿತ್ಯಾನಂದ ಮತ್ತೆ ಧ್ಯಾನಪೀಠಕ್ಕೆ ಮರಳಿ ಧ್ಯಾನ ಯೋಗದ ಮೂಲಕ ಸಮಾಜಸೇವೆ ಮುಂದುವರೆಸಲಿ ಎಂಬ ನಿಟ್ಟಿನಲ್ಲಿ ನಿತ್ಯಾನಂದನ ಭಕ್ತರು ಎರಡುದಿನಗಳ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ರಾಜ್ಯ ಮತ್ತು ಹೊರರಾಜ್ಯಗಳಿಂದ ಆಗಮಿಸಿರುವ ನಿತ್ಯಾನಂದನ ಭಕ್ತರು ನಿತ್ಯಾನಂದನ ದರ್ಶನಕ್ಕಾಗಿ ನಿರಾಹಾರರಾಗಿ ದೇವರ ಪ್ರಾರ್ಥನೆ ಮಾಡುತ್ತಿರುವುದಾಗಿ ಧ್ಯಾನಪೀಠವಾಸಿ ಅರ್ಪಣಾನಂದ ಹೇಳಿದ್ದಾರೆ.
ನಟಿ ರಂಜಿತಾ ಜೊತೆ ಪಲ್ಲಂಗ ಹಂಚಿಕೊಂಡ ನಿತ್ಯಾನಂದನ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ಜೂನ್ 8ರ ಮಂಗಳವಾರದಂದು ನಡೆಯಲಿದೆ.