ಚಿತ್ರಲೇಖಾ ಕೇಸ್: ಅರುಂಧತಿ ನಾಗ್ ವಿಷಾದ
ಅವಳ ಮನೆಗೆ ನಾನು ಶಂಕರ್ನಾಗ್ ಹೋಗಿಬರುತ್ತಿದ್ದೆವು. ಆ ದಿನ ಅವಳು ಕಾಣೆಯಾದ ಸುದ್ದಿ ಕೇಳಿ ದಿಕ್ಕು ತೋಚದಂತಾಗಿತ್ತು. ನಂತರ ಸಕಲೇಶಪುರ ಘಾಟ್ನಲ್ಲಿ ಅವಳ ಶವ ಸಿಕ್ಕಿದಾಗ ದಿಗ್ಭ್ರಮೆಗೊಂಡಿದ್ದೆ ಎಂದು ನೆನಪಿಸಿಕೊಂಡರು. ಈಗ ತೀರ್ಪು ಗಮನಿಸಿದ ಮೇಲೆ ನ್ಯಾಯ ಎಲ್ಲಿದೆ ಎನ್ನುವಂತಾಗಿದೆ. ಈ ಕೇಸ್ ಪುನಃ ವಿಚಾರಣೆಯಾಗಬೇಕು.
ಇದನ್ನು ಹೀಗೆ ಬಿಟ್ಟರೆ ಮುಂದೆ ರಾಜ್ಯದಲ್ಲಿ ಇಂಥಹ ಪ್ರಕರಣಗಳು ಹೆಚ್ಚಾಗುತ್ತವೆ. ಈ ರೀತಿ ಅರುಂಧತಿ ನಾಗ್ ಮನದ ಮೂಲೆಯಲ್ಲಿದ್ದ ಸಂಕಟವನ್ನು ಹೊರ ಹಾಕಿದರು.ನಾನು ಈ ರಾಜ್ಯದ ಜನ ಸಾಮಾನ್ಯರಲ್ಲಿ ಒಬ್ಬಳಾಗಿ ಈ ರೀತಿ ಕೇಳುತ್ತಿದ್ದೇನೆ ಎಂದರು ಅರುಂಧತಿ ನಾಗ್.
ಜಸ್ಟೀಸ್ ಸಾಲ್ಡಾನಾ ಖೇದ: ಚಿತ್ರಲೇಖಾ ಕೊಲೆ ಕುರಿತ ಪರಿಸ್ಥಿತಿಯ ಸಂದರ್ಭದಲ್ಲಿದ್ದ ಸಾಕ್ಷ್ಯಗಳನ್ನು ಪರಿಗಣಿಸದೆ ಭಾರತಿ ಅರಸ್ ಅವರನ್ನು ಬಿಡುಗಡೆ ಮಾಡಿರುವ ಕೆಳ ಹಂತದ ನ್ಯಾಯಾಲಯದ ಧೋರಣೆಗೆ ಜಸ್ಟೀಸ್ ಸಾಲ್ಡಾನಾ ಖೇದ ವ್ಯಕ್ತಪಡಿಸಿದ್ದಾರೆ.
ಕೊಲೆಗೆ ಸಂಬಂಧಿಸಿದಂತೆ ನೇರವಾಗಿ ಸಾಕ್ಷ್ಯಗಳು ದೊರಕದಿದ್ದರೂ ಆ ಸಂದರ್ಭದಲ್ಲಿ ಸಾಲಕ್ಕೆ ಸಂಬಂಧಿಸಿದಂತೆ ಅವರ ನಡುವೆ ನಡೆದಿರುವ ಮಾತುಕತೆ ಹಾಗೂ ಇನ್ನಿತರ ನಡವಳಿಕೆಗಳು ಸಾಕ್ಷ್ಯವಾಗಿ ನಿಲ್ಲುತ್ತವೆ. ಕೊಲೆಗೆ ಪೂರಕವಾಗಿ ಸಾಕಷ್ಟು ಪುರಾವೆಗಳಿವೆ ಎಂದರು. ಈ ರೀತಿಯ ತೀರ್ಪಿನಿಂದ ಜನರು ನ್ಯಾಯಾಲಯದ ಬಗೆಗಿರುವ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ ಎಂದು ಸಾಲ್ಡಾನಾ ಹೇಳಿದರು.