ಗುಂಡು ಹಾರಿಸಿದ್ದು ಕಾಡು ನಾಯಿಗೆ ಗುರೂಜಿಗಲ್ಲ
ಕಾಡು ನಾಯಿಗಳನ್ನು ಬೆದರಿಸಲು ಹಾರಿಸಿದ ಗುಂಡು ಅದಾಗಿತ್ತು ಎಂದು ಅಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಪಕ್ಕದಲ್ಲಿ ಮಹದೇವ್ ಪ್ರಸಾದ್ ಎಂಬುವವರ ಹತ್ತು ಎಕರೆ ಜಮೀನಿದೆ. ಪೊಲೀಸರು ಅವರನ್ನು ಪ್ರಶ್ನಿಸಲಾಗಿ ಕಾಡು ನಾಯಿಗಳನ್ನು ಬೆದರಿಸಲು ಸಿಡಿಸಿದ ಗುಂಡು ಅದು ಎಂದು ತಿಳಿಸಿದ್ದಾರೆ.
ತಮ್ಮ ಜಾನುವಾರುಗಳಿಗೆ ತೊಂದರೆ ಕೊಡುತ್ತಿದ ಕಾಡು ನಾಯಿಗಳನ್ನು ಬೆದರಿಸಲು ಮಹದೇವ್ ಅವರು ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಅದರಲ್ಲಿ ಒಂದು ಗುಂಡು ಅಚಾನಕ್ ಆಗಿ ಆಶ್ರಮದಲ್ಲಿ ಬಂದು ಬಿದ್ದಿದೆ ಎಂದು ಮಹದೇವ್ ಪೊಲೀಸರಿಗೆ ವಿವರ ನೀಡಿದ್ದಾರೆ.
ಆಶ್ರಮದಲ್ಲಿ ಸಿಕ್ಕಿರುವ ಕಾಡತೂಸನ್ನು ರಾಮನಗರ ಜಿಲ್ಲಾ ಪೊಲೀಸರು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಮಹದೇವ್ ಅವರ ಬಳಿ ಇರುವ ಪಿಸ್ತೂಲಿನ ಗುಂಡುಗಳಿಗೂ ಆಶ್ರಮದಲ್ಲಿ ಸಿಕ್ಕಿರುವ ಗುಂಡಿಗೂ ತಾಳೆಯಾಗಿದ್ದು ಸಮಸ್ಯೆ ಬಗೆಹರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗಾಲದ ವರದಿಯೂ ಇದನ್ನು ಸ್ಪಷ್ಟಪಡಿಸಿದೆ. ಸತ್ಸಂಗ ಮುಗಿಸಿಕೊಂಡು ಮೇ.30ರ ಭಾನುವಾರ ಆಶ್ರಮಕ್ಕೆ ಹಿಂತಿರುಗಿದ ರವಿಶಂಕರ್ ಗುರೂಜಿ ಅವರು ಈ ಘಟನೆಗೆ ಸಾಕ್ಷಿಯಾಗಿದ್ದರು. ಒಟ್ಟಿನಲ್ಲಿ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದ ಗುಂಡಿನ ದಾಳಿ ಬಗೆಹರಿದಂತಾಗಿದೆ. ಈ ಸುದ್ದಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಗುರೂಜಿಗೆ ಮತ್ತು ಆಶ್ರಮಕ್ಕೆ ನಂತರ ಭಾರೀ ಭದ್ರತೆಯನ್ನೂ ಒದಗಿಸಲಾಗಿತ್ತು.
ಗುರೂಜಿ ಪ್ರತಿಕ್ರಿಯೆ : ಗುಂಡು ಹಾರಿಸಿದ್ದು ನಾಯಿಗೆ ಎಂಬ ವಿಷಯ ತಿಳಿಯುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಅವರು, ನಾನು ಮೊದಲೇ ಹೇಳಿದ್ದೆ, ನಾನು ಕೇವಲ ಸ್ವಾಮೀಜಿ ಮಾತ್ರ, ನನಗಾರೂ ವೈರಿಗಳಿಲ್ಲ. ಗುಂಡು ಹಾರಿಸಿದ್ದು ವೈರಿಗಳು ಎಂಬ ಸುದ್ದಿಯನ್ನು ಮೊದಲೇ ಅಲ್ಲಗಳೆದಿದ್ದೆ ಎಂದು ಹೇಳಿದ್ದಾರೆ.