ಕಾಂಗ್ರೆಸ್ ಮೈತ್ರಿ ಮುರಿದುಕೊಂಡ ಜೆಡಿಎಸ್
ಮೊದಲಿನಿಂದಲೂ ಜೆಡಿಎಸ್ ಜೊತೆ ಮೈತ್ರಿಯನ್ನು ಕೆಪಿಸಿಸಿ ವಿರೋಧಿಸುತ್ತಾ ಬಂದಿತ್ತು. ಆದರೆ, ಹೊಂದಾಣಿಕೆಯ ಭರವಸೆ ಹೊತ್ತ ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ದೆಹಲಿಯಲ್ಲೇ ಬೀಡು ಬಿಟ್ಟಿದ್ದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಸಚಿವ ಗುಲಾಂ ನಬಿ ಅಜಾದ್ ಅವರೊಡನೆ ಚರ್ಚೆ ನಡೆಸಿದರೂ ಕುಮಾರಸ್ವಾಮಿಗೆ ಫಲ ಸಿಗಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಅರ್ ವಿ ದೇಶಪಾಂಡೆ, ಜೆಡಿಎಸ್ ಅಭ್ಯರ್ಥಿ ರಾಜೀನಾಮೆ ಬಗ್ಗೆ ತಿಳಿದಿಲ್ಲ. ಕಾಂಗ್ರೆಸ್ ಹೈ ಕಮಾಂಡ್ ತೀರ್ಮಾನಕ್ಕೆ ತಾವು ಬದ್ಧ ಎಂದರು.
ಮೈತ್ರಿಗೆ ಸಮಸ್ಯೆ ಏನು?: ಕಾಂಗ್ರೆಸ್ ನ ಆರ್ ವಿ ವೆಂಕಟೇಶ್ ಎರಡನೇ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಆದರೆ, ಜೆಡಿಎಸ್ ನ ಸೂರ್ಯ ನಾರಾಯಣ್ ಅವರನ್ನು ಆರಿಸಲು ಮನಸ್ಸು ಮಾಡಿದ್ದ ಕುಮಾರಸ್ವಾಮಿ ಬಳಗಕ್ಕೆ ಕೆಪಿಸಿಸಿ ಸೊಪ್ಪು ಹಾಕದೆ, ಆರ್ ವಿ ವೆಂಕಟೇಶ್ ಅವರನ್ನೇ ಆಯ್ಕೆ ಮಾಡಿತು. ಸೂರ್ಯ ನಾರಾಯಣ್ ಅಧಿಕೃತವಾಗಿ ಇಂದು ತಮ್ಮ ನಾಮಪತ್ರವನ್ನು ಹಿಂಪಡೆದರು. ಪರಿಣಾಮವಾಗಿ ಕಣದಲ್ಲಿದ್ದ ಏಳು ಮಂದಿ ಅವಿರೋಧವಾಗಿ ಆಯ್ಕೆ ಯಾದರು.
ಬಿಜೆಪಿಯ ಅಶ್ವತ್ಥನಾರಾಯಣ್, ವಿ ಸೋಮಣ್ಣ, ನಾರಾಯಣ್ ಬಾಂಡೆ, ವಿಜಯಶಂಕರ್ ,ಕಾಂಗ್ರೆಸ್ ನ ಆರ್ ವಿ ವೆಂಕಟೇಶ್ , ವೀರಣ್ಣ ಮತ್ತಿಕಟ್ಟೆ ಹಾಗೂ ಜೆಡಿಎಸ್ ನ ಶ್ರೀನಿವಾಸ್ ವಿಧಾನಪರಿಷತ್ ಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸುವುದೊಂದೇ ಬಾಕಿ.
ರಾಜ್ಯಸಭೆ ರಂಗು: ಬಿಜೆಪಿ ಎರಡು ಸ್ಥಾನ , ಕಾಂಗ್ರೆ ಸ್ ಒಂದು ಸ್ಥಾನ ಪಡೆಯುವುದು ಗ್ಯಾರಂಟಿಯಾಗಿದ್ದು, ಜೆಡಿಎಸ್ ಮೈತ್ರಿ ಮುರಿದುಕೊಂಡಿರುವುದರಿಂದ ಮೂರನೇ ಸ್ಥಾನಕ್ಕೆ ಲಾಬಿ ಶುರುವಾಗಿದೆ. ಜೂ.17 ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ.