ಇದು ರಿಯಲ್ ಎಸ್ಟೇಟ್ ದಂಧೆ : ರೈತ ಮುಖಂಡರು
4 ಲಕ್ಷ ಕೋಟಿ ಬಂಡವಾಳ ಹೂಡಿಕೆ ಲಕ್ಷಾಂತರ ಮಂದಿಗೆ ಉದ್ಯೋಗ ಎಂದೆಲ್ಲಾ ಸುಳ್ಳು ಭರವಸೆ ನೀಡಿ, ರೈತರ ಭೂಮಿ ಕಬಳಿಕೆ ಮಾಡಲಾಗುತ್ತಿದೆ. ಈಗಾಗಲೆ ರೈತರಿಂದ ವಶಪಡಿಸಿಕೊಂಡ ಕೃಷಿಭೂಮಿಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಾಗಿದ್ದು, ರೈತರಿಗೆ ಪರಿಹಾರ ಸರಿಯಾಗಿ ಸಿಕ್ಕಿಲ್ಲ. ಇದು ರಿಯಲ್ ಎಸ್ಟೇಟ್ ದಂಧೆ ಆಗುತ್ತಿದೆ ಎಂದು ಸರ್ಕಾರದ ವಿರುದ್ಧ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆರೋಪ ಮಾಡಿದರು.
ದೇಶಿ ಉದ್ಯಮ ಉಳಿಸಿ : ರಾಜ್ಯ ಸರ್ಕಾರ ದೇಶಿ ಉದ್ದಿಮೆಗಳನ್ನು ಉಳಿಸದೆ, ವಿದೇಶಿ ಶ್ರೀಮಂತ ಕಂಪನಿಗಳಿಗೆ ಉದ್ದಿಮೆಗಳನ್ನು ಸ್ಥಾಪಿಸಲು ಅವಕಾಶ ನೀಡುತ್ತಿದೆ.ಈಗಾಗಲೇ ರಾಜ್ಯದಾದ್ಯಂತ ಸುಮಾರು 1.90 ಲಕ್ಷ ಕೃಷಿ ಭೂಮಿಯನ್ನು ಸರ್ಕಾರ ವಶಕ್ಕೆ ತೆಗೆದುಕೊಂಡಿದೆ. ಇನ್ನೂ 50 ಸಾವಿರ ಎಕರೆ ಭೂಸ್ವಾಧೀನಕ್ಕೆ ನೋಟಿಫಿಕೇಷನ್ ಹೊರಡಿಸಿದೆ. ಕೃಷಿ ಯೋಗ್ಯ ಭೂಮಿಯನ್ನು ಕೈಗಾರಿಕೆಗೆ ಬಳಸಲಾಗುತ್ತಿದೆ.
ಬಾಗಿಲು ಮುಚ್ಚಿರುವ ಲಕ್ಷಾಂತರ ಸಣ್ಣ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸಬೇಕು .ಕಬ್ಬು ಬೆಳೆಗೆ 30 ಸಾವಿರ ರು. ಸಾಲ ನೀಡಬೇಕು . ಮಂಡ್ಯ ತಾಲೂಕಿನ ಶಿವಳ್ಳಿ, ಮುದಗಂದೂರು ಮುಂತಾದೆಡೆ ಸ್ಟೀವಿಯಾ ಸೊಪ್ಪು ಬೆಳೆಯಲು ರೈತರ ಹೆಸರಿನಲ್ಲಿ ಸಾಲ ಪಡೆದಿರುವ ಮೆಡಿ ಹರ್ಬ್ ಕಂಪನಿ ರೈತರಿಗೆ ಲಕ್ಷಾಂತರ ರು. ವಂಚನೆ ಮಾಡಿದೆ ಎಂದು ಪುಟ್ಟಣ್ಣಯ್ಯ ಕಿಡಿಕಾರಿದರು.