ಜಾತಿ ಹೆಸರಲ್ಲಿ ಸರಕಾರಿ ಸೌಲಭ್ಯ ಲೂಟಿ
ಈ ಕುರಿತಂತೆ ಸೋಮವಾರ ತಹಶೀಲ್ದಾರ ಡಾ. ಪ್ರಶಾಂತ ನಾಲವಾರ ಅವರಿಗೆ ದೂರು ಸಲ್ಲಿಸಿರುವ ಎರಡೂ ಸಂಘಟನೆಯ ಪದಾಧಿಕಾರಿಗಳು, ಜಾತಿ ಪ್ರಮಾಣ ಪತ್ರದ ದಾಖಲೆಗಳನ್ನು ತಿದ್ದುಪಡಿ ಮಾಡಲಾಗಿರುವ ಬಗ್ಗೆ ಸೂಕ್ತ ಸಾಕ್ಷಾಧಾರಗಳನ್ನೂ ಸಲ್ಲಿಸಿದ್ದಾರೆ.
ಸವಣೂರ ಶಹರದಲ್ಲಿ 'ಭೋಯಿ' ಸಮಾಜದ ಕೆಲವು ವ್ಯಕ್ತಿಗಳು ಭೋವಿ ಎಂದು ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ. ತಂದೆಯ ಹೆಸರಿನಲ್ಲಿ ಭೋಯಿ ಎಂದು ದಾಖಲೆಗಳಿದ್ದರೂ, ಮಕ್ಕಳಿಗೆ ಭೋವಿ ಎಂದು ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ತಾಲೂಕಿನಾಧ್ಯಂತ ಈ ರೀತಿಯಲ್ಲಿ ಬಹಳಷ್ಟು ಖೊಟ್ಟಿ ಜಾತಿ ಪ್ರಮಾಣ ಪತ್ರಗಳು ವಿತರಣೆಗೊಂಡಿರಬಹುದು. ಅವುಗಳನ್ನು ಪತ್ತೆ ಮಾಡಿ ಕಾನೂನಿನ ಅಡಿ ಕ್ರಮ ಜರುಗಿಸಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.
ಈ ಕುರಿತಂತೆ ಸರಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದ್ದರೂ, ಅದನ್ನು ನಿರ್ಲಕ್ಷಿಸಲಾಗುತ್ತಿದೆ. ಈ ರೀತಿಯ ನಕಲಿ ಜಾತಿ ಪ್ರಮಾಣ ಪತ್ರದಿಂದ ಭೋವಿ ಸಮಾಜದ ಜನರು ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ತಾಲೂಕಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ವಿತರಣೆ ಮುಂದುವರೆದಲ್ಲಿ ಸಂಘಟನೆಯ ವತಿಯಿಂದ ಹೋರಾಟ ಮಾಡಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಹೇಮಣ್ಣ ಸಾಲಿ, ಶಿದ್ರಾಮಪ್ಪ ಇಟಗಿ, ಪರಸಪ್ಪ ಹತ್ತಿಮತ್ತೂರ, ನಿಂಗಪ್ಪ ಬಂಡಿವಡ್ಡರ, ಬಸವರಾಜ ವಡ್ಡರ, ಫಕ್ಕೀರಪ್ಪ ಬೂದಿಹಾಳ, ಚನ್ನಪ್ಪ ದೇವಸೂರ, ಉಮೇಶ ತಿಮ್ಮಾಪೂರ, ಬಸಪ್ಪ ಬಡಿಗೇರ, ನಾಗಪ್ಪ ತಿಮ್ಮಾಪೂರ, ನಾಗಪ್ಪ ನರೇಗಲ್ಲ, ದ್ಯಾಮಣ್ಣ ವಡ್ಡರ, ಆರ್.ಪಿ ಶಿಗ್ಗಾಂವಿ, ಹನುಮಂತಪ್ಪ ಸವಣೂರ, ತಿರುಪತಿ ಯಲವಿಗಿ, ದ್ಯಾಮಣ್ಣ ಕುಂದಗೋಳ, ಸೋಮಣ್ಣ ಬೇವಿನಹಳ್ಳಿ, ಲಕ್ಷ್ಮಣ ಕನವಳ್ಳಿ, ಬಸವರಾಜ ಮಲ್ಲಾಡದ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.