ನಾನು ಆರ್ಎಸ್ಎಸ್ ಕಾರ್ಯಕರ್ತ : ಯಡಿಯೂರಪ್ಪ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಯಾವುದೇ ಜನಪರ ಸಂಘಟನೆ, ಪ್ರತಿಭಟನೆಗಳಲ್ಲಿ ಭಾಗವಹಿಸಲು ಸ್ವತಂತ್ರರು. ಅವರ ಪ್ರತಿಭಟನೆ, ಸಂಘಟನೆ, ಹೋರಾಟಕ್ಕೆ ನಾನು ಯಾವುದೇ ಕಾರಣಕ್ಕೂ ಅಡ್ಡಿ ಮಾಡುವುದಿಲ್ಲ ಎಂದರು.
ಆದರೆ ಇವರು ಮಾಡುತ್ತಿರುವ ಧರಣಿ, ಪ್ರತಿಭಟನೆಗಳು ಎಷ್ಟರಮಟ್ಟಿಗೆ ಸರಿಯಿವೆ ಎಂದು ಆತ್ಮಾಲೋಕನ ಮಾಡಿಕೊಳ್ಳುವ ಶಕ್ತಿಯನ್ನು ಭಗವಂತ ಅವರಿಗೆ ಕರುಣಿಸಲಿ. ನನ್ನ ಸರ್ಕಾರದ ಸಾಧನೆಯಿಂದಲೇ ಪ್ರತಿಪಕ್ಷಕ್ಕೆ ನಾನು ಉತ್ತರ ನೀಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಜನಪರ, ದೀನ ದಲಿತರ ಪರವಾದ ಸಾಕಷ್ಟು ಯೋಜನೆಗಳು ಯಶಸ್ವಿಯಾಗಿ ಜಾರಿ ಆಗುತ್ತಿವೆ. ಸರ್ಕಾರಕ್ಕೆ ಗ್ರಾಮೀಣ ಜನರ ಆಶೀರ್ವಾದ ಸಿಕ್ಕಿದೆ. ಇದನ್ನು ಸಹಿಸದ ಪ್ರತಿಪಕ್ಷಗಳು ನಮ್ಮನ್ನು ಟೀಕಿಸುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ಚತಪಡಿಸಿದರು.
ಆರೋಗ್ಯ, ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ನೀರಾವರಿಗೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳ್ವೆ - ಸುಗಮ ಜೀವನಕ್ಕೆ ದಾರಿ ಎನ್ನುವ ವಿಚಾರಗಳನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡು ಎಲ್ಲರನ್ನೂ ಒಗ್ಗೂಡಿಸಿಕೊಂಡು ಸರ್ಕಾರ ಜನಪರ ಆಗಿದೆ ಎಂದರು.
ರಾಜ್ಯದ ಯಾವುದೇ ಕೂಲಿಕಾರ್ಮಿಕರ ಮಕ್ಕಳು ಡಾಕ್ಟರ್, ಇಂಜಿನಿಯರ್ ಶಿಕ್ಷಣ ಪಡೆದು ಸ್ವಂತ ಬಲದಿಂದ ಮುಂದೆ ಬರಲು ಭಾಗ್ಯಲಕ್ಷ್ಮೀ ಯೋಜನೆ ಸುಮಾರು 9 ಲಕ್ಷ ಬಡ ಹೆಣ್ಣು ಮಕ್ಕಳಿಗೆ ನೀಡಿದ್ದು ಅತ್ಯಂತ ತೃಪ್ತಿದಾಯಕ ಎಂಬ ಹರ್ಷ ವ್ಯಕ್ತಪಡಿಸಿದರು.