ಶೋಭಕ್ಕ ಗೃಹಮಂತ್ರಿಯಂತೆ ? ಹೌದಾ!
ಸಂಪುಟದಲ್ಲಿ ಈಗಾಗಲೇ ಮೂರು ಸ್ಥಾನಗಳು ಖಾಲಿ ಇವೆ. ಗೃಹ ಸಚಿವ ಆಚಾರ್ಯ ಅವರನ್ನು ದೆಹಲಿಗೆ ದಬ್ಬುವ ಕಾರ್ಯ ಶುರುವಾಗಿದೆ. ಈ ಸ್ಥಾನದಲ್ಲಿ ಶೋಭಾ ಕರಂದ್ಲಾಜೆ ಅವರನ್ನು ತರಲು ಮುಖ್ಯಮಂತ್ರಿ ಯಡಿಯೂರಪ್ಪ ಟೊಂಕ ಕಟ್ಟಿ ನಿಂತಿದ್ದಾರೆ ಎನ್ನುವ ಸುದ್ದಿ ವಿಧಾನಸೌಧದ ಮೊಗಸಾಲೆ ಕೇಳಿ ಬರತೊಡಗಿದೆ. ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂದು ಹೇಳುತ್ತಾ ಬಂದಿರುವ ಮುಖ್ಯಮಂತ್ರಿ, ಸದ್ದಿಲ್ಲದೇ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬ ಚಿಂತನೆ ನಡೆಸಿದ್ದಾರೆ.
ಸಂಪುಟದಲ್ಲಿ ಒಬ್ಬೇ ಒಬ್ಬ ಮಹಿಳೆಗೆ ಸ್ಥಾನ ಕಲ್ಪಿಸದಿರುವ ಕಾರಣ ಅನೇಕ ಟೀಕೆ ಟಿಪ್ಪಣಿಗಳನ್ನು ಯಡಿಯೂರಪ್ಪ ಎದುರಿಸಬೇಕಾಗಿದೆ. ಇದ್ದೊಬ್ಬ ಸಮರ್ಥ ಮಂತ್ರಿ ಶೋಭಾ ಕರಂದ್ಲಾಜೆ ಅವರಿಂದ ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ರಾಜೀನಾಮೆ ಪಡೆದುಕೊಂಡಿದ್ದರು. ಇದೀಗ ಮತ್ತೆ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಿದೆ. ಜೂನ್ ತಿಂಗಳ 15ರೊಳಗೆ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ.
ಇದರ ಜೊತೆಗೆ ಸಂಪುಟದಲ್ಲಿ ಕೆಲಸ ಮಾಡದಿರುವ ಸೋಮಾರಿ ಸಚಿವರನ್ನು ಕೈಬಿಡಲು ಸಿಎಂ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ. ಕನಿಷ್ಠ ನಾಲ್ಕಾರು ಮಂದಿಯನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕೊಡಬೇಕು ಎನ್ನುವ ಆಲೋಚನೆಯೂ ಯಡಿಯೂರಪ್ಪ ಅವರದಾಗಿದೆ. ಆದರೆ, ರೆಡ್ಡಿಗಳ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಜಗದೀಶ್ ಶೆಟ್ಟರ್ ಕೂಡ ಬಾಯಿ ಬಿಟ್ಟಿಲ್ಲ. ರೇಣುಕಾಚಾರ್ಯ ಬಾಯಿಬಿಡುವ ಛಾನ್ಸೆ ಇಲ್ಲ. ಬೇಳೂರು ಗೋಪಾಲಕೃಷ್ಣ, ಸಿಟಿ ರವಿ, ಆನೇಕಲ್ ನಾರಾಯಣಸ್ವಾಮಿ, ಶಂಕರಲಿಂಗೇಗೌಡ, ಡಿ ಎಚ್ ಶಂಕರಮೂರ್ತಿ, ಕಮಲಾಗೌಡ ಇತರರು ಹೋರಾಟ ಆರಂಭವಾಗಲಿದೆ. ಯಾರು ಏನೇ ಮಾಡಿದರೂ ಶೋಭಾ ಕರಂದ್ಲಾಜೆ ಮಂತ್ರಿಯಾಗಿ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಒಟ್ಟಿನಲ್ಲಿ ಜೂನ್ ತಿಂಗಳಲ್ಲಿ ಸರಕಾರದಲ್ಲಿ ಬಿರುಗಾಳಿ ಏಳುವ ಸಾಧ್ಯತೆ ಇವೆ ಅಂತೀರಾ?
ಯಾತ್ರೆಯಲ್ಲಿರುವ ನಾನು ಬೆಂಗಳೂರಿಗೆ ಮರಳುವುದು ಜೂನ್ 4ಕ್ಕೆ ಎಂದು ಶೋಭಾ ಅವರೇ ಫೇಸ್ ಬುಕ್ ಮತ್ತು ಟ್ವಿಟ್ಟರ್ ಬರೆದುಕೊಂಡಿದ್ದಾರೆ. ಅಲ್ಲಿಯವರೆಗೆ ಸಸ್ಪೆನ್ಸ್ ಮುಂದುವರಿಯಲಿದೆ.